ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಜಾರಿಯಲ್ಲಿರುವ ಒಂಟಿ ಮನೆ ಯೋಜನೆ ಬಡವರ ಪಾಲಿಗೆ ನರಕವಾಗಿದ್ದು, ಈ ಯೋಜನೆಯನ್ನು ರದ್ದು ಮಾಡಿ ಬಡವರ ಜೀವನ ಉಳಿಸಿ ಎಂದು ಅಹಿಂದ ಕನ್ನಡ ರಕ್ಷಣಾ ವೇದಿಕೆ ಕರ್ನಾಟಕ ಅಧ್ಯಕ್ಷ ಕೆ.ಜಿ. ಶ್ರೀನಿವಾಸ್ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡವರು, ದಲಿತರು, ಅಲ್ಪಸಂಖ್ಯಾತರಿಗಾಗಿ 2011ರಿಂದ ಒಂಟಿ ಮನೆ ಯೋಜನೆ ಜಾರಿಗೊಳಿಸಿದ್ದು, ನಗರದಲ್ಲಿ ಈ ಯೋಜನೆ ವ್ಯಾಪ್ತಿಯಲ್ಲಿ 3000ಸಾವಿರ ಹೆಚ್ಚು ಫಲಾನುಭವಿಗಳಿದ್ದಾರೆ. ಒಂಟಿ ಮನೆ ಯೋಜನೆಯನ್ನು ರದ್ದು ಮಾಡಿ, ಅವರ ಜೀವನವನ್ನು ಉಳಿಸಬೇಕು. ಒಂಟಿ ಮನೆ ಯೋಜನೆ ಫಲಾನುಭವಿಗಳಿಗೆ ಇದೀಗ ಮನೆ ಕೆಡವುತ್ತಿದ್ದಾರೆ. ಬಿಬಿಎಂಪಿಯಿಂದ ಹೊಸದಾಗಿ ಸೂರು ಕಟ್ಟಿಸಿಕೊಡುವುದಾಗಿ ನಂಬಿಸಿ ತೆರವುಗೊಳಿಸಲಾಗುತ್ತಿದೆ. ಇದರಿಂದ ಫಲಾನುಭವಿಗಳು ಈ ಕಡೆ ಮನೆ ದೊರೆಯದೇ, ಬಾಡಿಗೆ ಕಟ್ಟಲಾಗದೇ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.

ಫಲಾನುಭವಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಹೇಳುತ್ತಾರೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 25 ಮನೆ ಹಂಚುವುದಾಗಿ ತಿಳಿಸಿದ್ದು, ಆದರೆ 300 ಕ್ಕೂ ಅಧಿಕ ಅರ್ಜಿಗಳು ಬರುತ್ತಿವೆ. ರಾಜಕಾರಣಿಗಳ ಶಿಪಾರಸ್ಸು ಮಾಡಿದವರಿಗೆ ಮಾತ್ರ ಅವಕಾಶ ಸಿಗುತ್ತದೆ. ಅದರೆ ಬಡವರಿಗೆ ದೊರೆಯುತ್ತಿಲ್ಲ ಎಂದು ವಿಷಾದಿಸಿದರು.
ಒಂಟಿ ಮನೆ ಯೋಜನೆಯಿಂದ ಅನುದಾನ ಬರುತ್ತದೆ ಎಂದು ಸಾಲ ಮಾಡಿ ಮನೆ ಕಟ್ಟಿಕೊಂಡವರೂ ಸಹ ಸಂಕಷ್ಟದಲ್ಲಿದ್ದಾರೆ,. ಆದರೆ ಇಂತಹವರಿಗೆ ಈ ವರೆಗೆ ಯಾವುದೇ ಅನುದಾನ ದೊರೆತಿಲ್ಲ. 2010 ರಿಂದ ಒಂಟಿ ಮನೆ ಯೋಜನೆ ಅನುದಾನ ಬಿಡುಗಡೆಯಾಗದೇ ಇರುವುದರಿಂದ ಹಲವಾರು ಫಲಾನುಭವಿಗಳು ಪ್ರಾಣ ಕಳೆದುಕೊಂಡಿದ್ದಾರೆ. ನಾಲ್ಕು ಹಂತದ ಚಕ್ ಗಳನ್ನು ಒಂಟಿ ಮನೆ ಯೋಜನೆ ಅಡಿ ನೀಡಬೇಕಿದ್ದು, ಈವರೆಗೆ ಕೇವಲ ಎರಡು ಚಕ್ ಗಳನ್ನು ಕೊಟ್ಟಿದ್ದಾರೆ. ಇನ್ನು ಹಲವು ಕಡೆ ಯಾವುದೇ ಹಣ ಬಂದಿಲ್ಲ. ಹೀಗಾಗಿ ನಿಷ್ಪ್ರಯೋಜನವಾಗಿರುವ ಒಂಟಿ ಮನೆ ಯೋಜನೆಯನ್ನ ಕೈಬಿಟ್ಟರೆ ಫಲಾನುಭವಿಗಳ ಜೀವನ ಉಳಿಯುತ್ತದೆ ಎಂದು ಹೇಳಿದರು.