LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬಳ್ಳಾರಿಯಲ್ಲಿ ಸಂಭ್ರಮದಿಂದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ

ಬ್ರಹ್ಮಶ್ರೀ ನಾರಾಯಣ ಗುರು ಸಾಮಾಜಿಕ ಸಮಾನತೆಗಾಗಿ ಶ್ರಮಿಸಿದವರು: ಕೆ.ಇ.ಚಿದಾನಂದಪ್ಪ

 

ಬಳ್ಳಾರಿ : ಸಾಮಾಜಿಕ ಕ್ರಾಂತಿಯ ಮೂಲಕ ಜಾತೀಯತೆ, ಅಸ್ಪೃಶ್ಯತೆ ಎಂಬ ವಿಷ ವೃಕ್ಷವನ್ನು ತೆಗೆದುಹಾಕುವ ಮೂಲಕ ಸಾಮಾಜಿಕ ಸಮಾನತೆಗಾಗಿ ಶ್ರಮಿಸಿದವರು ಬ್ರಹ್ಮಶ್ರೀ ನಾರಾಯಣ ಗುರುಗಳು ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ ಅವರು ಹೇಳಿದರು.

 

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ರಾಜ್‍ಕುಮಾರ್ ರಸ್ತೆಯ ಸಾಂಸ್ಕೃತಿಕ ಸಮುಚ್ಛಯ ಆವರಣದ ಹೊಂಗಿರಣ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಬ್ರಹ್ಮಶ್ರೀ ನಾರಾಯಣಗುರು  ಜನ್ಮದಿನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

 

ಭಾರತದಲ್ಲಿಯೇ ಕಂಡರಿಯದ ಅಮಾನುಷ ವರ್ತನೆ ನಂಬೂದರಿ ಎಂಬ ವರ್ಗದಿಂದ ಶೂದ್ರರ, ಅಸ್ಪೃಶ್ಯರ, ಸ್ತ್ರೀಯರ, ಕೆಳವರ್ಗದ ಜಾತಿಗಳ ಮೇಲೆ ನಡೆಯುವ ದೌರ್ಜನ್ಯಗಳನ್ನು ತಡೆಯಲು ಕ್ರೌರ್ಯ, ದೌರ್ಜನ್ಯ, ಹಿಂಸೆ, ಬುದ್ಧಿ ಜೀವಿಗಳ ನಾಡಾದ ಕೇರಳದಲ್ಲಿ 19 ನೇ ಶತಮಾನದಲ್ಲಿ`ಈಳವ' ಎಂಬ ಅಸ್ಪೃಶ್ಯ ಜಾತಿಯಲ್ಲಿ ನಾರಾಯಣ ಗುರು ಜನಿಸಿದವರು. ಆ ಸಮಾಜದವರು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಸಂಸ್ಕಾರವಂತರಾಗಿ ಸಬಲರಾಗಬೇಕು ಎಂದು ತಿಳಿಸಿದರು.



ಬಳ್ಳಾರಿಯ ಆಕಾಶವಾಣಿ ಎಫ್.ಎಂ ಕೇಂದ್ರದ ಉದ್ಘೋಷಕರು ಮತ್ತು ಉಪನ್ಯಾಸಕರಾದ ಬಸವರಾಜ ಅಮಾತಿ, ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಕೇರಳದ ಈಳವ ಸಮಾಜದವರಾದ ಮದನ್ ಆಸನ್ ಹಾಗೂ ಕುಟ್ಟಿ ಅಮ್ಮಾಳ್ ಎಂಬ ದಂಪತಿಗಳಿಗೆ ನಾರಾಯಣ ಗುರು ಜನಿಸಿದರು. ಕೇರಳ ರಾಜ್ಯದಲ್ಲಿ ಜಾತಿ, ಮತಭೇದಗಳು ಹೆಚ್ಚಾಗಿದ್ದ ಕಾಲದಲ್ಲಿ ನಾರಾಯಣ ಗುರು ಎಂಬ ಒಬ್ಬ ಸಮಾಜ ಸುಧಾರಕ, ಉದಯಿಸಿ, ಸಮಾಜದ ತಾರತಮ್ಯಗಳನ್ನು ಕಡಿಮೆ ಮಾಡಲು ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟರು ಎಂದು ಹೇಳಿದರು.

 

"ಜಗತ್ತಿನಲ್ಲಿರುವುದು ಒಂದೇ ಜಾತಿ, ಒಂದೇ ಮತ, ಹಾಗೂ ಒಂದೇ ದೇವರು" ಎಂಬ ಸತ್ಯವಾಕ್ಯವನ್ನು ನಾರಾಯಣ ಗುರುಗಳು ಪ್ರತಿಪಾದಿಸಿದ ತತ್ವವಾಗಿತ್ತು. ಅದ್ವಿತೀಯ ಪಂಡಿತರಾಗಿದ್ದ ಅವರು, ಕೇರಳ ಸಮಾಜದಲ್ಲಿ ಅಸ್ಪೃಶ್ಯತೆಯ ಪಿಡುಗಿಗೆ ತಮ್ಮದೇ ಆದ ನಿಲುವಿನಲ್ಲಿ, ಸಮಾಧಾನಕರವಾದ ಉಪಾಯಗಳನ್ನು ಕಂಡುಕೊಂಡವರು ಎಂದರು.



ಕಾರ್ಯಕ್ರಮದಲ್ಲಿ ಬಳ್ಳಾರಿಯ ರೇಣುಕಾ.ಎ ತಂಡದವರು ಭಕ್ತಿ ಸಂಗೀತ ಗಾಯನ ಪ್ರಸ್ತುತಪಡಿಸಿದರು.

 

ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಜಿಲ್ಲಾ ಆರ್ಯ ಈಡಿಗ ಗೌನ ಮಹಾಜನ ಸಂಘದ ಜಿಲ್ಲಾಧ್ಯಕ್ಷ ಹೆಚ್.ಆರ್.ಶ್ರೀನಾಥ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಯ ಪದಾಧಿಕಾರಿಗಳು, ಸಮಾಜದ ಮುಖಂಡರು, ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು.



ಅದ್ದೂರಿ ಮೆರವಣಿಗೆ:

ಬ್ರಹ್ಮಶ್ರೀ ನಾರಾಯಣ ಗುರು ಜಯಂತ್ಯೋತ್ಸವ ಅಂಗವಾಗಿ ನಗರದಲ್ಲಿ ಅದ್ದೂರಿ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಭಾವಚಿತ್ರದೊಂದಿಗೆ ಪೂರ್ಣ ಕುಂಭ ಹೊತ್ತ ಮಹಿಳೆಯರು ಹಾಗೂ ವಿವಿಧ ಸಾಂಸ್ಕೃತಿಕ ಕಲಾತಂಡಗಳು ಗಮನ ಸೆಳೆದವು.

ಮೆರವಣಿಗೆಯು ನಗರದ ಹಿಡಿಗ ಹಾಸ್ಟೆಲ್ ನಿಂದ ಆರಂಭವಾಗಿ ಗಡಿಗಿ ಚನ್ನಪ್ಪ ವೃತ್ತ-ಡಾ.ರಾಜಕುಮಾರ್ ರಸ್ತೆ- ಇಂದಿರಾ ವೃತ್ತದ ಮೂಲಕ ಸಾಂಸ್ಕೃತಿಕ ಸಮುಚ್ಚಯ ಹೊಂಗಿರಣ ಸಭಾಂಗಣದ ವೇದಿಕೆಯವರೆಗೆ ತಲುಪಿ ಸಂಪನ್ನಗೊಂಡಿತು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST