ಪಾರ್ವತಿನಗರದ ಶಿವ ಧ್ಯಾನ-ಜ್ಞಾನ ಮಂದಿರದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಶಿಬಿರ ನಡೆಯಲಿದೆ. ಭಾರತ ಮತ್ತು ನೇಪಾಳದಾದ್ಯಂತ ಬೃಹತ್ ರಕ್ತ ದಾನ ಶಿಬಿರದ ಮೂಲಕ ಬ್ರಹ್ಮಾಕುಮಾರಿಸ್ ಗಿನ್ನೆಸ್ ವಿಶ್ವದಾಖಲೆ ಸ್ಥಾಪಿಸಲು ಸಜ್ಜುಗೊಂಡಿದೆ. ರಾಜಯೋಗಿನಿ ದಾದಿ ಪ್ರಕಾಶಮಣಿಜಿ ಅವರ 18 ನೇ ಪವಿತ್ರ ಪುಣ್ಯದಿನವನ್ನು (ಆಗಸ್ಟ್ 25) ವಿಶ್ವ ಭ್ರಾತೃತ್ವ ದಿನ ಎಂದು ಆಚರಿಸಲಾಗುತ್ತದೆ. ಈ ಪವಿತ್ರ ದಿನದ ಸ್ಮರಣಾರ್ಥವಾಗಿ ರಕ್ತದ ತುರ್ತು ಅಗತ್ಯವನ್ನು ಪೂರೈಸುವ ಹಾಗೂ ವಿಶ್ವ ಭ್ರಾತೃತ್ವದ ಸಂದೇಶವನ್ನು ಹರಡುವ ಉದ್ದೇಶದಿಂದ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ವತಿಯಿಂದ ಬೃಹತ್ ರಕ್ತದಾನ ಆಭಿಯಾನವನ್ನು ಆಯೋಜಿಸಿದೆ ಎಂದರು.

ರಾಷ್ಟ್ರ ಮಟ್ಟದ ಉದ್ಘಾಟನಾ ಸಮಾರಂಭ ಇದೇ 17 ರಂದು ದೆಹಲಿಯ ಓಂ ಶಾಂತಿ ರಿಟ್ರೇಟ್ ಸೆಂಟರ್ನಲ್ಲಿ ನೆರವೇರಿದೆ. ಈ ಅಭಿಯಾನವನ್ನು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರು ಉದ್ಘಾಟಿಸಿದ್ದಾರೆ. ಆ.22 ರಿಂದ 25ರವರೆಗೆ ಭಾರತ ಮತ್ತು ನೇಪಾಳದ 1500ಕ್ಕೂ ಹೆಚ್ಚು ಬ್ರಹ್ಮಾಕುಮಾರಿ ಸೇವಾ ಕೇಂದ್ರಗಳಲ್ಲಿ ಬೃಹತ್ ರಕ್ತದಾನ ಅಭಿಯಾನವನ್ನು ಆಯೋಜಿಸಲಾಗಿದೆ. ಆಗಸ್ಟ್ 22 ರಿಂದ 25ರ ವರೆಗೆ 100 ಗಂಟೆಗಳಲ್ಲಿ 1,00,000 (ಒಂದು ಲಕ್ಷ) ಯೂನಿಟ್ ರಕ್ತ ಸಂಗ್ರಹಿಸಿ, ಅದನ್ನು ಸಾರ್ವಜನಿಕ ಆರೋಗ್ಯಕ್ಕಾಗಿ ನೀಡುವ ಹೆಗ್ಗುರಿಯನ್ನು ಹೊಂದಲಾಗಿದೆ ಎಂದರು.
ರಕ್ತದಾನದ ಮಹತ್ವವನ್ನು ತಿಳಿಸಿದ ಅವರು, ಆಯೋಜಕರು ಜನರಿಗೆ "ರಕ್ತದಾನ-ಮಹಾದಾನ" ಎಂಬ ಸಂದೇಶವನ್ನು ಸಾರಲಿದ್ದಾರೆ. ದಾನ ಮಾಡಿದ ರಕ್ತವು ಅಪಘಾತ ಪೀಡಿತರು, ಗಂಭೀರವಾದ ಅಸ್ವಸ್ತರಾದವರು, ಶಸ್ತ್ರಚಿಕಿತ್ಸೆಗೆ ಒಳಗಾಗುವವರು ಹಾಗೂ ತುರ್ತು ಅವಶ್ಯಕತೆಯುಳ್ಳ ರೋಗಿಗಳಿಗೆ ಜೀವದಾನವಾಗುತ್ತದೆ. ಬ್ರಹ್ಮಾಕುಮಾರೀಸ್ ಸಂಸ್ಥೆ ಪ್ರತಿವರ್ಷವೂ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಈ ಬಾರಿಯ ರಕ್ತದಾನ ಶಿಬಿರವು ಸಹ ಸಮುದಾಯ ಸೇವೆಯಾಗಿ ಮಹತ್ವ ಪಡೆದುಕೊಂಡಿದೆ. ಜೀವದಾನ ನೀಡುವ ಈ ಮಹತ್ತರ ಸೇವೆಯಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದರು.