ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಗಾದಿಗನೂರ ಗ್ರಾಮದ ಉಷಾ (25)ಎಂಬ ಗರ್ಭಿಣಿಗೆ ಬೆಳಗ್ಗೆ ಹೆರಿಗೆ ನೋವು ಶುರುವಾಯಿತು. ಆ ಸಮಯದಲ್ಲಿ ಕುಟುಂಬಸ್ಥರು ಅದೇ ಗ್ರಾಮದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದರು. ಬೆಳಿಗ್ಗೆಯಿಂದ ಸಂಜೆಯವರೆಗೆ ಆ ಗರ್ಭಿಣಿಯನ್ನು ಆಸ್ಪತ್ರೆಯಲ್ಲಿಯೇ ಇಟ್ಟುಕೊಂಡು ಚಿಕಿತ್ಸೆ ನೀಡಿದರು. ನಂತರ ಗರ್ಭಿಣಿಗೆ ತೀವ್ರ ಹೆರಿಗೆ ನೋವು ಶುರುವಾಯಿತು. ಆಗ ಆಸ್ಪತ್ರೆಯ ಸಿಬ್ಬಂದಿ 108 ಅಂಬುಲೆನ್ಸ್ ಗೆ ಕರೆ ಮಾಡಿದರು.

ತಕ್ಷಣವೇ ಸ್ಥಳಕ್ಕೆ ಅಂಬುಲೆನ್ಸ್ ಬಂದು 108 ಸಿಬ್ಬಂದಿಗಳು ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಆ ಗರ್ಭಿಣಿಯು ನೋವಿನಿಂದ ಬಳಲುತ್ತಿರುವುದನ್ನು ನೋಡಿ 108 ಸಿಬ್ಬಂದಿಗಳು ಮಾರ್ಗ ಮಧ್ಯದಲ್ಲಿಯೇ ಅಂಬುಲೆನ್ಸ್ ನ್ನು ನಿಲ್ಲಿಸಿ ರಸ್ತೆಯ ಪಕ್ಕಕ್ಕೆ ಹಾಕಿ 10 ನಿಮಿಷಗಳಲ್ಲಿಯೇ ಸುರಕ್ಷಿತವಾಗಿ ನಾರ್ಮಲ್ ಹೆರಿಗೆ ಮಾಡಿಸಿದರು. ತಾಯಿ ಹಾಗೂ ಮಗು ಇಬ್ಬರು ಆರೋಗ್ಯದಿಂದ ಇದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹೊಸಪೇಟೆ ಸರ್ಕಾರಿ ಆಸ್ಪತ್ರೆ ಎಂ.ಸಿ.ಹೆಚ್. ಆರೋಗ್ಯ ಕೇಂದ್ರಕ್ಕೆ ದಾಖಲಿಸಿದರು.
ಈ ಸಂದರ್ಭದಲ್ಲಿ 108 ಸಿಬ್ಬಂದಿಗಳಾದ ಇಎಂಟಿ.ಸುರೇಶ್, ಪೈಲಟ್ ಹೆಚ್.ಎಂ.ಶರಣಯ್ಯ, ಹಾಗೂ ಕುಟುಂಬಸ್ಥರು ಇದ್ದರು. ನಂತರ ಕುಟುಂಬಸ್ಥರು 108 ಇ.ಎಂ.ಆರ್.ಐ. ಸಿಬ್ಬಂದಿಗಳಿಗೆ ಮತ್ತು ಅಧಿಕಾರಿಗಳಿಗೆ ಕೃತಜ್ಞತೆಗಳನ್ನು ತಿಳಿಸಿದರು.