ಚಳ್ಳಕೆರೆ: ನಾಯಕನಹಟ್ಟಿ ಪೊಲೀಸ್ ಠಾಣೆಯ ವ್ಯಾಪ್ತಿಯ ಕಾರ್ತಿಕೇನಹಟ್ಟಿ ಗ್ರಾಮದ ನಾಗರಾಜ ರವರ ಕುರಿದೊಡ್ಡಿಯಲ್ಲಿ ಡಿ.11ರಂದು 11 ಕುರಿ/ಮೇಕೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದ ದೂರಿನ ಮೇರೆಗೆ ನಾಯಕನಹಟ್ಟಿ ಪೊಲೀಸರು ಎಫ್ ಐ ಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡು ಐವರನ್ನು ಬಂಧಿಸಿದ್ದಾರೆ.
ಸದರಿ ಪ್ರಕರಣದಲ್ಲಿ ಆರೋಪಿತರ ಪತ್ತೆಗಾಗಿ ಪೊಲೀಸ್ ಅಧೀಕ್ಷಕರಾದ ರಂಜಿತ್ ಕುಮಾರ್ ಬಂಡಾರು, ಐಪಿಎಸ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಡಾ.ಆರ್ ಶಿವಕುಮಾರ್ ರವರ ಮಾರ್ಗದರ್ಶನದಲ್ಲಿ ಸತ್ಯನಾರಾಯಣರಾವ್, ಪೊಲೀಸ್ ಉಪಾಧೀಕ್ಷಕರು ಚಳ್ಳಕೆರೆ ಉಪವಿಭಾಗ ರವರ ನಿರ್ದೇಶನದಲ್ಲಿ ಪೊಲೀಸ್ ತಳಕು ವೃತ್ತ ನಿರೀಕ್ಷಕರಾದ ಹನುಮಂತಪ್ಪ ಎಂ.ಶಿರೀಹಳ್ಳಿ ರವರ ನೇತೃತ್ವದಲ್ಲಿ ಪಿಎಸ್ ಐ ಪಾಂಡುರಂಗ ಜಿ ಹಾಗೂ ಸಿಬ್ಬಂದಿಗಳಾದ ಹಾಲೇಶಪ್ಪ, ಶ್ರೀಹರಿ,ತಿಮ್ಮೇಶ ಹಾಗೂ ಸೈಬರ್ ಕ್ರೈಂ ಠಾಣೆಯ ಭೀಮನಗೌಡ ಪಾಟೀಲ್,ಚಿತ್ರದುರ್ಗ ಗಣಕಯಂತ್ರ ವಿಭಾಗದ ಸತೀಶ ಮತ್ತು ಪ್ರಕಾಶ ರವರನ್ನು ಒಳಗೊಂಡ ತಂಡವನ್ನು ರಚನೆ ಮಾಡಿ ಪತ್ತೆಗೆ ನೇಮಿಸಿದ್ದು ಈ ತಂಡವು ಕುರಿ ಕಳ್ಳರನ್ನು ಸೆರೆ ಹಿಡಿಯುವಲ್ಲಿ ಕೊನೆಗೂ ಪೊಲೀಸರು ಯಶಸ್ವಿಯಾಗಿದ್ದಾರೆ.
1)ಸಣ್ಣಬಂಗಾರಯ್ಯ ತಂದೆ ಮಾಳಿಗೆ ಬಂಗಾರಯ್ಯ, 60 ವರ್ಷ, ಎಳನೀರು ವ್ಯಾಪಾರ,ನಾಯಕ ಜನಾಂಗ,ಚಿಕ್ಕಉಳ್ಳಾರ್ತಿ ಗ್ರಾಮ, ಚಳ್ಳಕೆರೆ ತಾಲ್ಲೂಕು. 2) ರವಿಕುಮಾರ ತಂದೆ ಓಬಯ್ಯ,27 ವರ್ಷ,ನಾಯಕ ಜನಾಂಗ, ಹಮಾಲಿ ಕೆಲಸ, ಮಲ್ಲೂರಹಳ್ಳಿ ಗ್ರಾಮ, ಚಳ್ಳಕೆರೆ ತಾಲ್ಲೂಕು, 3)ರಾಜಣ್ಣ ತಂದೆ ಬೈಯ್ಯಣ್ಣ 42 ವರ್ಷ, ನಾಯಕ ಜನಾಂಗ, ಮಲ್ಲೂರಹಳ್ಳಿ ಗ್ರಾಮ,ಚಳ್ಳಕೆರೆ ತಾಲ್ಲೂಕು 4) ಭಾಷಾ ತಂದೆ ಹುಸೇನ್ ಸಾಬ್, 53 ವರ್ಷ, ಮುಸ್ಲಿಂ ಜನಾಂಗ, ಸೋಡಾ ವ್ಯಾಪಾರ, ಗಾಂಧಿ ನಗರ, ಚಳ್ಳಕೆರೆ ಟೌನ್, 5) ನಾಗೇಶ ತಂದೆ ಭೂತಯ್ಯ 40 ವರ್ಷ, ನಾಯಕ ಜನಾಂಗ, ಮಲ್ಲೂರಹಳ್ಳಿ ಗ್ರಾಮ,ಚಳ್ಳಕೆರೆ ತಾಲ್ಲೂಕು ಇವರು ಬಂಧಿತ ಆರೋಪಿಗಳಾಗಿದ್ದಾರೆ.
ದಿನಾಂಕ:11.11.2025 ರಂದು ಕಾರ್ತಿಕೇನಹಟ್ಟಿ ಗ್ರಾಮದಲ್ಲಿ ಹಾಗೂ ದಿನಾಂಕ:30.05.2025 ರಂದು ಮನ್ನೆಕೋಟೆ ಗ್ರಾಮದಲ್ಲಿ ಕುರಿ/ಮೇಕೆಗಳನ್ನು ಕಳ್ಳತನ ಮಾಡಿರುವಾಗಿ ಒಪ್ಪಿಕೊಂಡಿದ್ದರಿಂದ ಆರೋಪಿತರನ್ನು ದಸ್ತಗಿರಿ ಮಾಡಿ ನಾಯಕನಹಟ್ಟಿ ಪೊಲೀಸ್ ಠಾಣೆಯ ಒಂದು ಪ್ರಕರಣದಲ್ಲಿ 40,000/- ರೂ ನಗದು ಹಣವನ್ನು ಹಾಗೂ ತಳಕು ಪೊಲೀಸ್ ಠಾಣೆಯ ಒಂದು ಪ್ರಕರಣದಲ್ಲಿ 5,000/-ರೂ ನಗದು ಹಣವನ್ನು ಹಾಗೂ ಕೃತ್ಯಕ್ಕೆ ಬಳಸಿದ್ದ ಸುಮಾರು 6,00,000/- ರೂ ಬೆಲೆ ಬಾಳುವ ಗೂಡ್ಸ್ ವಾಹನ ವಶ ಪಡಿಸಿಕೊಂಡಿದ್ದಾರೆ.
ಸದರಿ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ ನಾಯಕನಹಟ್ಟಿ ಪೊಲೀಸ್ ಠಾಣೆಯ ಪಿಎಸ್ ಪಾಂಡುರಂಗಪ್ಪ ಹಾಗೂ ಸಿಬ್ಬಂದಿಗಳ ತಂಡವನ್ನು ಚಿತ್ರದುರ್ಗ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.