ಚಿತ್ರದುರ್ಗ: ಚಿತ್ರದುರ್ಗದ ತಾಲೂಕು ಬಹುತೇಕ ಗ್ರಾಮಗಳು ಗುಡ್ಡಗಳ ಸಮೀಪ ಇರುವುದರಿಂದ ಕಾಡುಪ್ರಾಣಿಗಳ ಓಡಾಟ ಹೆಚ್ಚಿರುತ್ತದೆ ಹಾಗಾಗಿ ಸಾರ್ವಜನಿಕರು ಜಾಗೃತೆಯಿಂದ ಇರಬೇಕಾಗುತ್ತದೆ ಎಂದು ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಅವರು ತಿಳಿಸಿದರು.
ತಾಲೂಕಿನ ಅನ್ನೇಹಾಳ್ ಗ್ರಾಮಕ್ಕೆ ಸೋಮವಾರ ಭೇಟಿ ನೀಡಿ ಚಿರತೆ ದಾಳಿಗೆ ಒಳಗಾದ ಗ್ರಾಮದ ನಿವಾಸಿ ಸಿದ್ದೇಶ್ ವ್ಯಕ್ತಿಯ ಆರೋಗ್ಯವನ್ನು ವಿಚಾರಿಸಿ ಕುಟುಂಬಸ್ಥರಿಗೆ ಆತ್ಮಸ್ಥೈರ್ಯವನ್ನು ತುಂಬಿ ಮಾತನಾಡಿದರು,

ರೈತಾಪಿ ವರ್ಗದವರು ಯಥೇಚ್ಛವಾಗಿ ತೋಟ ಹೊಲಗಳಿಗೆ ರಾತ್ರಿ ವೇಳೆ ಹೋಗುವುದರಿಂದ ಇಂತಹ ಅನಾಹುತಗಳಿಗೆ ತುತ್ತಾಗುತ್ತಿದ್ದಾರೆ ತಾವುಗಳು ಎಚ್ಚರಿಕೆಯಿಂದ ತೋಟ, ಹೊಲಗಳಿಗೆ ಬೆಳಗಿನ ಸಮಯಹೋಗಿ ಕೆಲಸಗಳನ್ನು ಮಾಡಿಕೊಳ್ಳಿ ಎಂದು ತಿಳಿಸಿದರು.
ಓಬಣ್ಣನಹಳ್ಳಿ, ಕಕ್ಕೇರು, ಅನ್ನೇಹಾಳ್, ಮಹದೇವನಕಟ್ಟೆ, ಗ್ರಾಮಗಳಲ್ಲಿ ಚಿರತೆಗಳ ಓಡಾಟ ಹೆಚ್ಚಾಗಿದೆ ಇದಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿದ್ದೇನೆ, ಚಿರತೆಗಳು ಓಡಾಟ ಕಂಡಲ್ಲಿ ಬೋನ್ ಗಳನ್ನು ಇಡಬೇಕೆಂದು ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದೇನೆ ಎಂದು ತಿಳಿಸಿದರು.
ಕಳೆದ ಜುಲೈ 17ರಂದು ಅನ್ನೇಹಾಳ್ ಗ್ರಾಮದ ಸಿದ್ದೇಶ್ ಸಂಜೆ ಜಮೀನಿಗೆ ಹೋಗಿದ್ದಾಗ ಹೊಂಚುಹಾಕಿ ಕುಳಿತಿದ್ದ ಚಿರತೆ ದಾಳಿ ನಡೆಸಿದೆ. ತಲೆಯ ಹಿಂಬದಿಯು ರಕ್ತಸಿಕ್ತವಾಗಿದ್ದು, ಅಲ್ಲದೆ ಮೈ ಕೈಗೆ ಪರಚಿ ಗಾಯಗೊಳಿಸಿದೆ. ಹೆಚ್ಚಿನ ಚಿಕಿತ್ಸೆಗಾಗಿ ಯುವಕನನ್ನು ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಚಿಕಿತ್ಸೆಯನ್ನು ಮುಗಿಸಿ ಗುಣಮುಖರಾಗಿ ಗ್ರಾಮಕ್ಕೆ ಧಾವಿಸಿದ ಸಿದ್ದೇಶ್ ರವರ ನಿವಾಸಕ್ಕೆ ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಅವರು ಭೇಟಿ ಮಾಡಿ ಆರೋಗ್ಯವನ್ನು ವಿಚಾರಿಸಿ ಆರ್ಥಿಕ ಸಹಾಯ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಶಿವಣ್ಣ, ಅನ್ನೇಹಾಳ್ ಗ್ರಾಮದ ಮುಖಂಡರಾದ ಲೋಕೇಶ್, ಗುರು ಶಾಂತಪ್ಪ, ಸಿದ್ದೇಶ್, ಶೇಖರ್, ನಿರಂಜನ್ ಮೂರ್ತಿ, ಲೋಕೇಶ, ಪ್ರಭು ಸುಧಾ ನೀಲಮ್ಮ, ಸಾವಿತ್ರಮ್ಮ, ರತ್ನಮ್ಮ, ದೀಪು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಗ್ರಾಮಸ್ಥರು ಇದ್ದರು.