ಶ್ರೀ ಮೈತ್ರಿ ಅಸೋಶಿಯೇಷನ್ ನ ಪ್ರಾದೇಶಿಕ ಯೋಜನಾ ನಿರ್ದೇಶಕರಾದ ಸಿ. ಎಚ್ ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಅಂಗವಿಕಲ ಕಲ್ಯಾಣ ಅಧಿಕಾರಿ ಬಿಜಿ ಗೋವಿಂದಪ್ಪ ಅವರು ಚಾಲನೆ ನೀಡಿ, ಇಂದಿನ ಆಧುನಿಕ ಯುಗದಲ್ಲಿ ಯುವಜನತೆ ಜೂಜು ಮತ್ತು ಮಾದಕ ವಸ್ತುಗಳಿಂದ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಅವರು ತಮ್ಮ ಅಮೂಲ್ಯವಾದ ಜೀವನವನ್ನು ಮದ್ಯ ವ್ಯಸನ ಮತ್ತು ಮಾದಕ ಪದಾರ್ಥಗಳನ್ನು ಸೇವಿಸುವುದರಿಂದ, ದಿನೇ ದಿನೇ ಆರೋಗ್ಯವನ್ನು ಕುಗ್ಗಿಸಿ ಕೊಳ್ಳುತ್ತಿದ್ದಾರೆ. ಅಲ್ಲದೆ ಮಧ್ಯಪಾನದಿಂದ ಕೆಲ ಕುಟುಂಬಗಳು ಶೋಷಣೆಗೆ ಒಳಗಾಗುತ್ತಿವೆ ಎಂದು ಉದಾಹರಣೆಗಳನ್ನು ಪ್ರಸ್ತಾಪಿಸಿದರು.

ಇದೇ ವೇಳೆ ಅಂತರಾಷ್ಟ್ರೀಯ ಮಾದಕ ಪದಾರ್ಥಗಳ ವಿರೋಧಿ ದಿನದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ವೈದ್ಯಾಧಿಕಾರಿ ಡಾ.ಹರೀಶ್, ಇಂದಿನ ಯುವಕರು ಮದ್ಯಪಾನ ಮಾಡಿ, ಪ್ರಾಣ ಕಳೆದುಕೊಂಡು ತಮ್ಮ ಕುಟುಂಬದವರನ್ನು ಅನಾಥರನ್ನಾಗಿ ಮಾಡುತ್ತಿರುವುದು ನಿಜಕ್ಕೂ ಆತಂಕ ವಾದದ್ದು. ಇನ್ನು ಮುಂದಾದರೂ ಮಾದಕ ವಸ್ತುಗಳಿಂದ ದೂರವಿದ್ದು ತಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಜೀವನವನ್ನು ಸಾಗಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಕಾರ್ಯಕ್ರಮ ಸಂಯೋಜಕ ರಾಘವೇಂದ್ರ ಮಾತನಾಡಿ, ಸಮಾಜದಲ್ಲಿ ಮಾದಕ ವಸ್ತುಗಳು ಜೀವನದ ಮೇಲೆ ಯಾವ ರೀತಿ ಪರಿಣಾಮವನ್ನು ಬೀರುತ್ತದೆ ಎಂದು ವಿವರಿಸಿದರು.
ಬೆತೆಸ್ಥ ಪ್ರೌಢ ಶಾಲೆಯ ಮುಖ್ಯಗುರುಗಳಾದ ಭೂಪ್ರಕಾಶ್ ಅವರು ಮಾತನಾಡಿ, ಮದ್ಯಪಾನದಿಂದ ಯುವ ಪೀಳಿಗೆಯ ಜೀವನದ ಮೇಲೆ ಯಾವ ರೀತಿ ದುಷ್ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ತಿಳಿ ಹೇಳಿ, ಯಾವುದೇ ಕಾರಣಕ್ಕೂ ಯುವಕರು ದುಶ್ಚಟಗಳತ್ತ ಮುಖ ಮಾಡಬಾರದು. ಮದ್ಯವ್ಯಸನಿಗಳಾಗಿ ಜೀವನವನ್ನು ಹಾಳು ಮಾಡಿಕೊಳ್ಳಬಾರದು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿ. ಎಚ್ ಕುಮಾರಸ್ವಾಮಿ ಮಾತನಾಡಿ, ಮಧ್ಯಪಾನದಿಂದ ಸಮಾಜ ಮತ್ತು ಕುಟುಂಬ ಮೇಲಾಗುವ ದುಷ್ಟ ಪರಿಣಾಮಗಳ ಕುರಿತು ತಿಳಿಸಿದರು. ಯೋಗ ಶಿಕ್ಷಕ ಜಗನ್ನಾಥ ಇವರು ಮಾದಕ ಪದಾರ್ಥಗಳಿಂದ ದೇಹಕ್ಕೆ ಮನಸ್ಸಿಗೆ ಆಗುವ ಅಡ್ಡಪರಿಣಾಮಗಳ ಬಗ್ಗೆ ತಿಳಿಸಿದರು.
ಆರೋಗ್ಯ ನಿರೀಕ್ಷಣಾಧಿಕಾರಿ ಶರತ್ ಮಾತನಾಡಿ, ತಂಬಾಕು ಪದಾರ್ಥಗಳಿಂದ ಯುವಪೀಳಿಗೆ ಹಾಳಾಗುತ್ತಿದೆ ಹಾಗಾಗಿ ಜಾಗೃತರಾಗಿ ಎಂದು ಸಲಹೆ ನೀಡಿದರು.
ಶ್ರೀ ಮೈತ್ರಿ ಪುನರ್ ವಸತಿ ವ್ಯಸನ ಮುಕ್ತ ಕೇಂದ್ರದ ಯೋಜನಾ ನಿರ್ದೇಶಕ ಪ್ರಕಾಶ್ ಎಂ ಬಿ ಮಾತನಾಡಿ, ಮದ್ಯಪಾನದಿಂದ ಕುಟುಂಬದ ಮೇಲೆ ಆಗುವ ಅನಾನುಕೂಲ ಹಾಗೂ ಹಾನಿಯ ಬಗ್ಗೆ ವಿವರಿಸಿದರು. ಎಕ್ಸ್ ಕ್ಲೈಂಟ್ ಶ್ರೀನಿಧಿ ಸ್ವಾಮಿ ರವರು ಮಾತನಾಡಿ ವ್ಯಸನರಹಿತ ಜೀವನದ ಅನುಭವವನ್ನು ತಿಳಿಸಿದರು.

ಕಾರ್ಯಕ್ರಮವನ್ನು ಯೋಜನಾ ನಿರ್ದೇಶಕ ಎಂ ಬಿ ಪ್ರಕಾಶ್ ನಿರೂಪಿಸಿದರು. ವೀರೇಶ್ ಸ್ವಾಗತಿಸಿದರು. ಕೃಷ್ಣ ವಂದನಾರ್ಪಣೆ ನೆರವೇರಿಸಿದರು.