ಕೊಪ್ಪಳ : ಜಂಬೂಸವಾರಿ ಅಂದ ಕೂಡಲೇ ಎಲ್ಲರಿಗೂ ನೆನಪಾಗೋದು ಮೈಸೂರು. ದಸರಾ ಹಬ್ಬದ ದಿನ ಜಗತ್ತಿನ ಕಣ್ಣು ಮೈಸೂರು ಅಂಬಾರಿಯ ಮೇಲಿರುತ್ತದೆ. ಆದರೆ, ಆ ಜಂಬೂ ಸವಾರಿಗೆ ಕಲ್ಯಾಣ ಕರ್ನಾಟಕದಲ್ಲಿ ಪ್ರೇರಣೆ ಸಿಕ್ಕದ್ದು ಗಂಡುಗಲಿ ಕುಮಾರರಾಮ ಆಸ್ಥಾನದಲ್ಲಿ, ಇಂದಿಗೂ ಹೇಮಗುಡ್ಡ ಹಾಗೂ ಆನೆಗುಂದಿಯಲ್ಲಿ ಅದ್ದೂರಿಯಾಗಿ ಜಂಬೂಸವಾರಿ ನಡೆಯುತ್ತಿದೆ.
ಮೈಸೂರು ದಸರಾ ಜಂಬೂಸವಾರಿಯಂತೆಯೇ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೇಮಗುಡ್ಡ ಹಾಗೂ ಆನೆಗುಂದಿಯಲ್ಲಿ ಪ್ರತಿ ವರ್ಷ ಜಂಬೂಸವಾರಿ ನಡೆಯುತ್ತದೆ. 11ನೇ ಶತಮಾನದಲ್ಲಿ ಶುರುವಾದ ದಸರಾ ಜಂಬೂಸವಾರಿ, ಇಂದು ವಿಶ್ವವಿಖ್ಯಾತ ಮೈಸೂರು ದಸರಾ ಆಗಿ ಪ್ರಸಿದ್ಧಿ ಪಡೆದಿದೆ.

11ನೇ ಶತಮಾನದಲ್ಲಿ ಕುಮಾರರಾಮನ ಸಾಮ್ರಾಜ್ಯದ ದೇವತೆಯಾದ ದುರ್ಗಾಪರಮೇಶ್ವರಿ ದೇವಿಗೆ ಪ್ರತಿ ವರ್ಷ ಗಜಪಡೆಯ ಮೇಲೆ ಜಂಬೂಸವಾರಿ ನಡೆಸಲಾಗುತ್ತಿತ್ತು. ಬಳಿಕ ಈ ಪರಂಪರೆಯನ್ನು 14ನೇ ಶತಮಾನದಲ್ಲಿ ವಿಜಯನಗರ ಅರಸರು ಮುಂದುವರೆಸಿಕೊಂಡು ಬಂದಿದ್ದರು ಇಂದಿಗೂ ಆನೆಗುಂದಿ ರಾಜಮನೆತನದವರು ಸಾಂಪ್ರಾದಾಯಿಕವಾಗಿ ಮುಂದುವರೆಸಿಕೊಂಡು ಬಂದಿದ್ದಾರೆ
ಆದರೆ, ಮೈಸೂರು ಜಂಬೂಸವಾರಿಯ ಮೂಲ ಸ್ಥಾನ ಅಂದಿನ ಕುಮ್ಮಟದುರ್ಗ ಇಂದಿನ ಹೇಮಗುಡ್ಡದಲ್ಲಿದೆ. ಮೈಸೂರು ದಸರಾಗೂ ಒಂದು ದಿನ ಮೊದಲು ಆಯುಧ ಪೂಜೆಯ ದಿನ ದುರ್ಗಾಪರಮೇಶ್ವರಿ ದೇವಿಗೆ ಆನೆಯ ಮೇಲೆ ಅದ್ಧೂರಿಯಾಗಿ ಜಂಬೂ ಸವಾರಿ ನೆರವೇರುತ್ತದೆ ನಂತರ ಆನೆಗುಂದಿಯಲ್ಲಿ ನಡೆಯುತ್ತಿದೆ.
ಹೇಮಗುಡ್ಡ ಆನೆಗುಂದಿ ದಸರಾ ಅನಾದಿಕಾಲದಿಂದಲೂ ಕೂಡ ಪ್ರತಿ ವರ್ಷ ಕಟ್ಟಿಗೆಯ ಅಂಬಾರಿಯಲ್ಲಿ ದೇವಿಯ ಮೆರವಣಿಗೆ ನಡೆಸಲಾಗುತ್ತದೆ, ಮೆರವಣಿಗೆಯಲ್ಲಿ ಕೊಪ್ಪಳ, ಗಂಗಾವತಿ ಸುತ್ತಲಿನ ಜನರು ಭಾಗವಹಿಸಿ, ದಸರಾ ವೈಭೋಗವನ್ನ ಕಣ್ತುಂಬಿಕೊಳ್ಳುತ್ತಾರೆ.
ಮೈಸೂರು ದಸರಾ ಮಾದರಿಯಲ್ಲೇ ನಡೆಯುವ ದುರ್ಗಾಪರಮೇಶ್ವರಿ ದೇವಿಯ ಜಂಬೂಸವಾರಿ ಕಲ್ಯಾಣ ಕರ್ನಾಟಕ ಭಾಗದ ದಸರಾ ಮಹಾನವಮಿ ಹಬ್ಬ ಎಂದೇ ಖ್ಯಾತಿ ಪಡೆದಿದೆ.ಶರನ್ನವರಾತ್ರಿ ಅಂಗವಾಗಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಗಳು, ಆನೆಗುಂದಿ, ಹೇಮಗುಡ್ಡದಲ್ಲಿ ನಡೆಯುತ್ತವೆ.

ಗುರುವಾರ ಹಂಪೆಯ ಲಕ್ಷ್ಮಿ ಆನೆಯ ಮೇಲೆ ಆನೆಗುಂದಿಯ ಶ್ರೀ ದುರ್ಗಾಪರಮೇಶ್ವರಿ ಮೂರ್ತಿ ಜಂಬೂ ಸವಾರಿ ವಿಜೃಂಭಣೆಯಿಂದ ನಡೆಯಿತು,ಈ ಸಂದರ್ಭದಲ್ಲಿ ಆನೆಗುಂದಿ ಪೀಠಾಧಿಪತಿ ಶ್ರೀ ಬ್ರಹ್ಮಾನಂದ ಸ್ವಾಮೀಜಿ, ರಾಜಾ ಕೃಷ್ಣದೇವರಾಯ,ರಾಜಾಮಾತ ಲಲಿತರಾಣಿ ರಂಗದೇವರಾಯಲು, ಶಾಸಕ ಗಾಲಿ ಜನಾರ್ದನ ರೆಡ್ಡಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ ಸೇರಿದಂತೆ ರಾಮಕೃಷ್ಣ ಸಂಗಪುರ,ವೆಂಕಟರಮಣ ಚಿಕ್ಕ ರಾಂಪುರ ಉಪಸ್ಥಿತರಿದ್ದರು.