ಬೆಂಗಳೂರು: ಕರ್ನಾಟಕ ಸರ್ಕಾರದ ಮಾಜಿ ಸಚಿವ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹೆಚ್.ಆಂಜನೇಯ ಅವರು ಹಿಂದೂ ಧಾರ್ಮಿಕ ಆಚರಣೆಗಳನ್ನು ಅವಹೇಳನ ಮಾಡುವ ಮೂಲಕ ಅರ್ಚಕರ ತೇಜೋವಧೆ ಮಾಡುತ್ತಿದ್ದಾರೆ. ಹಿಂದೂಗಳ ಕುರಿತು ಅವರು ನೀಡಿದ ಹೇಳಿಕೆಯನ್ನು ವಾಪಸ್ಸು ಪಡೆದು ಬೇಷರತ್ ಆಗಿ ಕ್ಷಮೆ ಯಾಚಿಸಬೇಕೆಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯಾಧ್ಯಕ್ಷ ಎಸ್.ರಘುನಾಥ್ ಆಗ್ರಹಿಸಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಮಾನ ನಿಲ್ದಾಣಗಳಲ್ಲಿ ನಮಾಜ್ ಮಾಡಲು ರಾಜ್ಯ ಸರ್ಕಾರ ಅಧಿಕೃತವಾಗಿ ಅನಮತಿ ನೀಡಿದೆಯೆ? ಬೇರೆಯವರಿಗೂ ಅನುಮತಿ ನೀಡುವಿರಾ? ಎಂದು ಹೆಚ್.ಆಂಜನೇಯ ಅವರಿಗೆ ಮಾಧ್ಯಮದವರು ಪ್ರಶ್ನೆ ಕೇಳಿದಾಗ, ಆಂಜನೇಯ ಅವರು `ನಮಾಜ್ ಮಾಡೋದ್ರಲ್ಲಿ ತಪ್ಪೇನಿದೆ? ಅವರು ಧರ್ಮಶ್ರದ್ಧೆಯಿಂದ ಮಾಡುತ್ತಿದ್ದಾರೆ. ಅವ್ರನ್ನ ನೋಡಿ ನೀವೂ ಕಲೀರಿ' ಅಂತ ಹೇಳಿದ್ದಾರೆ. ಇದರರ್ಥ ಹಿಂದೂಗಳು ಇವರನ್ನು ನೋಡಿ ಕಲಿಯಬೇಕಂತೆ. ಇವರಿಂದ ಏನು ಕಲಿಯಬೇಕು? ಸನಾತನ ಧರ್ಮದ ಪರಂಪರೆಗಳನ್ನು ನಾವು ಸಹಸ್ರಾರು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದ್ದೇವೆ. ನಮ್ಮ ಧರ್ಮದ ಆಚರಣೆ, ನಮ್ಮ ಪೂಜಾ ಪದ್ಧತಿ, ನಮಗಿರುವ ನಂಬಿಕೆಯಿAದಲೇ ಸಾವಿರಾರು ವರ್ಷಗಳಿಂದ ನಮ್ಮ ಧರ್ಮ ಗಟ್ಟಿಯಾಗಿದೆ. ಇದನ್ನು ಆಂಜನೇಯ ಅವರು ತಿಳಿದುಕೊಳ್ಳಬೆಕೆಂದು ಎಸ್.ರಘುನಾಥ್ ತಿರುಗೇಟು ನೀಡಿದ್ದಾರೆ.
ಹೆಚ್.ಆಂಜನೇಯ ನಮ್ಮ ಪೂಜಾ ಪದ್ಧತಿಯನ್ನು ಅವಹೇಳನ ಮಾಡ್ತಾರೆ. ತಿಲಕ, ಭಸ್ಮ ಇಟ್ಕಂಡು, ಪೆಂಡಾಲ್ ಹಾಕ್ಕೊಂಡು, ತಟ್ಟೆ ಹಿಡ್ಕಂಡು ಕೂಗ್ತಾರೆ ಅಂತ ಅರ್ಚಕರನ್ನು ಕೀಳಾಗಿ ಕಂಡು, ಅವಹೇಳನ ಮಾಡ್ತಾರೆ. ಯಾವುದೇ ದೇವಸ್ಥಾನದಲ್ಲಿ ಯಾವುದೇ ಅರ್ಚಕರು ತಟ್ಟೆಗೆ ಕಾಣಿಕೆ ಹಾಕಿ ಅಂತ ಒತ್ತಾಯ ಮಾಡುವುದಿಲ್ಲ. ರಾಜ್ಯದಲ್ಲಿ ೪೨ ಸಾವಿರ ದೇವಸ್ಥಾನಗಳಿವೆ. ಈ ಎಲ್ಲ ದೇವಸ್ಥಾನಗಳಲ್ಲಿ ಪೂಜಾ ಪದ್ಧತಿ ಇದ್ದು ಈ ಪೈಕಿ ಕೇವಲ ೫ ಸಾವಿರ ಬ್ರಾಹ್ಮಣರು ಮಾತ್ರ ಅರ್ಚಕರಿದ್ದರೆ, ಉಳಿದ ದೇವಸ್ಥಾನಗಳಲ್ಲಿ ಎಲ್ಲ ಹಿಂದೂ ಸಮುದಾಯದ ಅರ್ಚಕರಿದ್ದಾರೆ. ೧೨ ಸಾವಿರ ದಲಿತ ಅರ್ಚಕ ಬಾಂಧವರಿದ್ದಾರೆ. ತಾವು ದಲಿತರಾಗಿದ್ದುಕೊಂಡು ದಲಿತ ಅರ್ಚಕರನ್ನು ವಿರೋಧಿಸುತ್ತೀರಾ? ಎಂದು ಆಂಜನೇಯ ಅವರನ್ನು ಪ್ರಶ್ನಿಸಿರುವ ಎಸ್.ರಘುನಾತ್, ಓಟ್ ಬ್ಯಾಂಕ್ ಗಾಗಿ ನೀವು ಒಂದು ಧರ್ಮವನ್ನು ಓಲೈಕೆ ಮಾಡುತ್ತಿದ್ದೀರಿ. ನಿಮ್ಮ ಸರ್ಕಾರ ಕೂಡ ಇದನ್ನೇ ಮಾಡುತ್ತಿದೆ ಎಂದು ಕಿಡಿ ಕಾರಿದರು.
ಸಂವಿಧಾನದ ಚೌಕಟ್ಟಿನಲ್ಲಿ ಭಾರತದ ಎಲ್ಲ ಧರ್ಮಗಳನ್ನೂ ಗೌರವಿಸಬೇಕು. ಮುಸ್ಲಿಮರು ಅಂಗಡಿಗಳಿಗೆ ತೆರಳಿ ಧೂಪ ಹಾಕಿ, ನವಿಲುಗರಿಯಿಂದ ಪ್ರಾರ್ಥನೆ ಮಾಡುತ್ತಾರೆ. ಅದು ಅವರ ನಂಬಿಕೆ. ಇದನ್ನು ನಾವೂ ಗೌರವಿಸುತ್ತೇವೆ. ಅವಹೇಳನ ಮಾಡುವುದಿಲ್ಲ. ಹೆಚ್.ಆಂಜನೇಯ ಅವರು ಸನಾತನ ಧರ್ಮವನ್ನು ತುಂಬಾ ಕೀಳುಮಟ್ಟದಲ್ಲಿ ಮಾತನಾಡುತ್ತಿದ್ದಾರೆ. ಗಣೇಶದ ಹಬ್ಬದ ಸಮಯದಲ್ಲಿಯೂ ನೀವು ಯಾವ ರೀತಿ ಮಾತನಾಡಿದ್ದೀರಿ ಎನ್ನುವುದನ್ನು ನಮ್ಮ ಬಾಯಿಯಿಂದ ಹೇಳುವುದಕ್ಕಾಗುವುದಿಲ್ಲ. ಅಷ್ಟೊಂದು ಕೀಳಾಗಿ ಮಾತನಾಡಿದ್ದೀರಿ. ತ್ರಿಕಾಲ ಸಂಧ್ಯಾ ವಂದನೆ, ಲಿಂಗಧಾರಣೆ ಮಾಡುವುದು ಹಿಂದೂಗಳ ಸಂಪ್ರದಾಯ ಮತ್ತು ಧಾರ್ಮಿಕ ಆಚರಣೆಯ ಶ್ರೇಷ್ಠತೆ. ಅದು ನಮ್ಮ ಪೂಜಾ ಪದ್ಧತಿಯಲ್ಲಿದೆ. ನಾವೂ ಕೂಡ ವಿಮಾನ ನಿಲ್ದಾಣ, ಬಸ್ ನಿಲ್ದಾಣ ಮತ್ತು ಸರ್ಕಾರದ ಬೇರೆ ಬೇರೆ ಕಚೇರಿಗಳಲ್ಲಿ ಮೌನವಾಗಿ ಧಾರ್ಮಿಕ ಆಚರಣೆಗಳನ್ನು ನಡೆಸುತ್ತೇವೆ. ಇದಕ್ಕೆ ನಿಮ್ಮಮ ಸರ್ಕಾರದಿಂದ ಅನುಮತಿ ನೀಡುತ್ತೀರಾ? ಎಂದು ಎಸ್.ರಘುನಾಥ್ ಖಾರವಾಗಿ ಪ್ರಶ್ನಿಸಿದ್ದಾರೆ.