ವಿಧಾನಸಭೆಯಲ್ಲಿಂದು ಪ್ರಶ್ನೋತ್ತರದ ಬಳಿಕ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ವಿಷಯ ಪ್ರಸ್ತಾಪ ಮಾಡಿ, ಧರ್ಮಸ್ಥಳದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾತನಾಡುವ ವೇಳೆ ಒಬ್ಬ ವ್ಯಕ್ತಿ ರಾಜ್ಯದ ಮುಖ್ಯಮಂತ್ರಿ 28 ಕೊಲೆ ಮಾಡಿದ್ದಾರೆ ಎಂದಿದ್ದಾರೆ. ಇದನ್ನು ಕೇಳಿದ ಬಳಿಕವೂ ಕ್ರಮ ಕೈಗೊಳ್ಳದಿದ್ದರೆ ಹೇಗೆ? ಸರ್ಕಾರ ಇಷ್ಟೊಂದು ನಿಷ್ಕ್ರಿಯವಾಗಬೇಕೆ ಎಂದು ಪ್ರಶ್ನಿಸಿದರು.
ಇದಕ್ಕೆ ದನಿಗೂಡಿಸಿದ ಬಿಜೆಪಿಯ ಸುನೀಲ್ಕುಮಾರ್, ಸುರೇಶ್ಕುಮಾರ್, ಅರಗಜ್ಞಾನೇಂದ್ರ ಮತ್ತಿತರರು ಮುಖ್ಯಮಂತ್ರಿ ಕೊಲೆಗಾರ ಎಂದು ಹೇಳಿರುವುದು ಈ ಸದನಕ್ಕೆ ಮಾಡಿದ ಅಪಮಾನ. ಇದನ್ನು ಸಲ್ಲಿಸಲು ಸಾಧ್ಯವಿಲ್ಲ. ಆತನ ಹೇಳಿಕೆಗಳ ಬಗ್ಗೆ ತನಿಖೆ ನಡೆಸಲು ಮತ್ತೊಂದು ಎಸ್ಐಟಿ ಮಾಡಿ ಎಂದು ಆಗ್ರಹಿಸಿದರು.

ಮಧ್ಯಪ್ರವೇಶಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಈ ರೀತಿ ಹೇಳಿಕೆ ನೀಡಿದ ವ್ಯಕ್ತಿಯ ಹೆಸರನ್ನು ಈ ಸದನದಲ್ಲಿ ಹೇಳಿ ಆತನನ್ನು ದೊಡ್ಡವನನ್ನಾಗಿ ಮಾಡಬೇಡಿ. ಆತ ಮುಖ್ಯಮಂತ್ರಿಯವರ ಬಗ್ಗೆ ಅಷ್ಟೇ ಅಲ್ಲ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಹಲವು ಬಿಜೆಪಿ ನಾಯಕರ ವಿರುದ್ಧವಾಗಿಯೂ ಮಾತನಾಡಿದ್ದಾನೆ. ಈ ಬಗ್ಗೆ ಸಿಎಂಗೆ ಮಾಹಿತಿ ಇರಲಿಲ್ಲ. ನಾನೇ ಹೋಗಿ ಅವರಿಗೆ ವಿವರಿಸಿದ್ದೇನೆ. ಅವರು ತಕ್ಷಣ ಗೃಹಸಚಿವರಿಗೆ ಸೂಚನೆ ನೀಡಿದ್ದಾರೆ. ಗೃಹಸಚಿವರು ಅಗತ್ಯ ಕ್ರಮ ಕೈಗೊಳ್ಳುತ್ತಾರೆ. ಆತನ ಏನು ಹೇಳಿದ್ದಾನೆ? ಏಕೆ ಹೇಳಿದ್ದಾನೆ ಮತ್ತು ನನ್ನ ಬಗ್ಗೆ ಏನು ಮಾತನಾಡಿದ್ದಾನೆ ಎಂಬ ಎಲ್ಲಾ ಅರಿವು ನನಗೆ ಇದೆ ಎಂದರು.
ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲೂ ಶಿವಲಿಂಗೇಗೌಡ ಸದರಿ ವ್ಯಕ್ತಿ ಮತ್ತು ಧರ್ಮಸ್ಥಳದ ಬಗ್ಗೆ ವಿಷಯ ತಿಳಿಸಿದ್ದಾರೆ ಎಂದು ಹೇಳಿದರು.

ಆರ್.ಅಶೋಕ್ ಅವರು ಮಧ್ಯಪ್ರವೇಶಿಸಿ ಆತ ಹೇಳಿಕೆ ನೀಡಿ 48 ಗಂಟೆಯಾಗಿದೆ. ಸರ್ಕಾರ ಇನ್ನು ಕ್ರಮ ಕೈಗೊಂಡಿಲ್ಲ. ಡಿ.ಕೆ.ಶಿವಕುಮಾರ್ ಅವರು ಬೇರೆ ಎಲ್ಲ ವಿಚಾರಗಳ ಬಗ್ಗೆ ತೊಡೆ ತಟ್ಟುತ್ತಾರೆ. ಆದರೆ ಸಿದ್ದರಾಮಯ್ಯ ಅವರನ್ನು ಕೊಲೆಗಾರ ಎಂದಿರುವುದಕ್ಕೆ ಅಷ್ಟು ದೊಡ್ಡದಾಗಿ ಮಾತನಾಡದೇ ಇರುವುದು ಅಚ್ಚರಿಯಾಗಿದೆ ಎಂದು ಅನುಮಾನ ವ್ಯಕ್ತಪಡಿಸಿದರು.
ಒಟ್ಟಾರೆ ಚರ್ಚೆಗೆ ಪ್ರತಿಕ್ರಿಯಿಸಿದ ಸಚಿವ ಪರಮೇಶ್ವರ್, ಸರ್ಕಾರ ಅಷ್ಟೊಂದು ಅಸಹಾಯಕವಾಗಿಲ್ಲ. ಹೇಳಿಕೆ ನೀಡಿದ ವ್ಯಕ್ತಿಯ ವಿರುದ್ಧ ಹತ್ತಾರು ಪ್ರಕರಣಗಳಿವೆ. ಆದಷ್ಟು ಶೀಘ್ರವಾಗಿ ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.