ಬಳ್ಳಾರಿ: ನಗರದ ಮೋತಿ ವೃತ್ತದ ಬಳಿಯ ಬುಡಾ ಕಾಂಪ್ಲೆಕ್ಸ್ನಲ್ಲಿ ಇತ್ತೀಚೆಗಷ್ಟೇ ನಡೆದಿದ್ದ ಕೊಲೆ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ನ.17ರಂದು ರಾತ್ರಿ ನಗರದ ಬುಡಾ ಕಾಂಪ್ಲೆಕ್ಸ್ ಹಿಂಭಾಗದಲ್ಲಿ ಕೊಲೆ ನಡೆದಿದ್ದು, ಮರುದಿನ ಬೆಳಗ್ಗೆ ಪೊಲೀಸರಿಗೆ ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಆರೋಪಿ ಪತ್ತೆಗೆ ಬಲೆ ಬೀಸಿದ್ದರು. ಕೊನೆಗೆ ಕೊಲೆ ಆರೋಪಿಯನ್ನು ಬಂಧಿಸಿದ ಪೊಲೀಸರು ಇಂದು ಬೆಳಗ್ಗೆ ಸ್ಥಳ ಮಹಜರು ಮಾಡಿದ್ದು, ಘಟನೆಯ ವಿವರವನ್ನು ಪಡೆದಿದ್ದು, ಮುಂದಿನ ಕ್ರಮ ಜರುಗಿಸಿದ್ದಾರೆ.
ಇನ್ನೂ ಕೊಲೆ ಪ್ರಕರಣದ ಬೆನ್ನತ್ತಿದ್ದ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಶೇಖರಿಸಿ, ಸ್ಥಳೀಯರ ಹೇಳಿಕೆಗಳು ಹಾಗೂ ಕೊಲೆ ಆರೋಪಿಯ ಬಂಧನದ ಬಳಿಕ ತಪ್ಪೊಪ್ಪಿಗೆ ಹಾಗೂ ಫೋರೆನ್ಸಿಕ್ ವರದಿಯ ಆಧಾರದ ಮೇಲೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನೆಯ ವಿವರ: ಆಂದ್ರಾಳ್ ಮೂಲದ ಶಿವು ( ಮೃತ ವ್ಯಕ್ತಿ) ಹಾಗೂ ರಾಂಪೂರ ಮೂಲದ ಕೊಲೆ ಆರೋಪಿ ಇಬ್ಬರೂ ಸ್ನೇಹಿತರಾಗಿದ್ದು, ಇಬ್ಬರೂ ಸೇರಿ ಬುಡಾ ಕಾಂಪ್ಲೆಕ್ಸ್ನ ನಾಲ್ಕನೇ ಮಹಡಿಯಲ್ಲಿ ಕಳ್ಳತನ ನಡೆಸಿ, ಕದ್ದ ಹಣ ಹಂಚಿಕೆಯಲ್ಲಿ ತಾರತಮ್ಯವಾದ ಹಿನ್ನೆಲೆಯಲ್ಲಿ ಇಬ್ಬರಲ್ಲೂ ತಕರಾರು ತೀವ್ರಗೊಂಡು ಮಾತಿ ಚಕಮಕಿ ನಡೆದಿದ್ದು, ಕುಡಿದ ಅಮಲಿನಲ್ಲಿದ್ದ ಆರೋಪಿಯು ಬಿಯರ್ ಬಾಟಲಿಯಿಂದ ಸ್ನೇಹಿತನ ತಲೆಗೆ ಹೊಡೆದಿದ್ದಾನೆ. ಬಳಿಕ ಕಟ್ಟಡದ ಮೇಲ್ಮಹಡಿಯಿಂದ ಕೆಳಗೆ ದಬ್ಬಿದ್ದಾನೆ ಎಂದು ತಿಳಿದುಬಂದಿದೆ.