ಬಳ್ಳಾರಿ : ಬಳ್ಳಾರಿ ತಾಲೂಕಿನ ಶ್ರೀಧರಗಡ್ಡೆ ಗ್ರಾಮದ ಬಳಿಯ ಪ್ಯೂಪಿಲ್ ಟ್ರೀ ಶಾಲೆ-ಕಾಲೇಜು ಆವರಣದಲ್ಲಿ ಎಬಿವಿಪಿ ಸಂಘಟನೆಯು ಇಂದು ಹೋರಾಟದ ಹೆಸರಿನಲ್ಲಿ ಗೂಂಡಾಗಿರಿ ಮಾಡಿದೆ ಎಂದು ಬಳ್ಳಾರಿ ನಗರ, ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಶ್ರೀಕಾಂತ್ ಗಂಭೀರವಾಗಿ ಆರೋಪಿಸಿದರು.
ಶುಕ್ರವಾರ ಸಂಜೆ ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಸಮಿತಿ (ನಗರ) ಕಚೇರಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.
ಪ್ಯೂಪಿಲ್ ಟ್ರೀ ಶಾಲೆಯ ವಿದ್ಯಾರ್ಥಿಗಳದ್ದು ಎನ್ನಲಾದ ವೀಡಿಯೋ ವೈರಲ್ ಆಗಿದ್ದು, ಅದರಲ್ಲಿ ಮಾದಕ ದ್ರವ್ಯ ಸೇವನೆಯ ದೃಶ್ಯ ಇವೆ ಎಂಬುದು ಎಬಿವಿಪಿ ಆರೋಪ. ಆದರೆ ವೈರಲ್ ಆದ ವೀಡಿಯೋ ಅದೇ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳದ್ದೇ? ಅಥವಾ ಬೇರೆಯವರದ್ದೇ? ಈಗಿನದೇ? ಅಥವಾ ಹಳೆಯದೇ? ಎಂಬ ಬಗ್ಗೆ ಖಚಿತತೆ ಇಲ್ಲ ಎಂದು ಹೇಳಿದ ಅವರು, ಪರಿಸ್ಥಿತಿ ಹೀಗಿರುವಾಗ ಎಬಿವಿಪಿ ಕಾರ್ಯಕರ್ತರು ಏಕಾಏಕಿ ಪ್ರತಿಭಟನೆಗೆ ಇಳಿದದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಜಿಲ್ಲೆಯಲ್ಲಿ ಅಶಾಂತಿ ಮೂಡಿಸುವ, ಕಾನೂನು ಸುವ್ಯವಸ್ಥೆಯನ್ನು ಹಾಳು ಮಾಡುವ ಉದ್ಧೇಶ ಎಬಿವಿಪಿಯದ್ದೇ? ಎಂಬ ಅನುಮಾನ ಬರುತ್ತದೆ ಎಂದರು.
ತಾನೊಂದು ವಿದ್ಯಾರ್ಥಿ ಸಂಘಟನೆ ಎಂದು ಹೇಳಿಕೊಳ್ಳುವ ಎಬಿವಿಪಿ ಪೂರಕ ಪರೀಕ್ಷೆಗಳು ನಡೆಯುವ ಸಂದರ್ಭ ಶಾಲೆಯ ಆವರಣದೊಳಗೆ ಅಕ್ರಮವಾಗಿ ನುಗ್ಗಿ, ಅಲ್ಲಿನ ಆಸ್ತಿ ಪಾಸ್ತಿ ಹಾಳು ಮಾಡುವುದು ಸರಿಯಲ್ಲ, ಯುವ ಕಾಂಗ್ರೆಸ್ ಸಮಿತಿ ಇದನ್ನು ಖಂಡಿಸುತ್ತದೆ ಎಂದರು.
ಮಾಧ್ಯಮದ ಮೂಲಕ ಪೊಲೀಸರಲ್ಲಿ ನಾವು ವಿನಂತಿಸುವುದೇನೆಂದರೆ ಇಡೀ ಪ್ರಕರಣ ತನಿಖೆಯಾಗಬೇಕು. ಕಾನೂನು ಕೈಗೆತ್ತಿಕೊಂಡವರ ವಿರುದ್ಧ ಕ್ರಮ ಜರುಗಬೇಕು ಎಂದು ಹೇಳಿದ ಶ್ರೀಕಾಂತ್, ಗ್ರಾಮೀಣ ಠಾಣೆಗೆ ತೆರಳಿ ಗೂಂಡಾಗಿರಿ ಮಾಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸುತ್ತೇವೆ ಎಂದರು.
ನಗರ ವಿಧಾನಸಭಾ ಕ್ಷೇತ್ರದ ಸಮಿತಿ ಅಧ್ಯಕ್ಷ ಖಾದರ್ ಮಾತನಾಡಿ; ಮಾದಕ ದ್ರವ್ಯ ಸೇವಿಸಿದ ಆರೋಪ ಇದ್ದರೆ ಪೊಲೀಸ್ ಠಾಣೆಗೆ ದೂರು ನೀಡಬೇಕಿತ್ತು, ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ಗಮನಕ್ಕೆ ತರಬೇಕಿತ್ತು, ಆದರೆ ಹೀಗೆ ಗಲಾಟೆ ಮಾಡಿರುವುದು ತಪ್ಪು ಎಂದರು.
ಸುದ್ದಿಗೋಷ್ಟಿಯಲ್ಲಿ ಧರ್ಮಶ್ರೀ, ತಬರೇಜ್, ಗೋಪಾಲ್, ಫೈಜಲ್, ಫರಾಜ್, ಅಬ್ದುಲ್ ಬಾರಿ, ಅಂಜನಿ, ಕವಿತಾ, ಶಶಿಕುಮಾರ್, ಚರಣರಾಜ್ ಮತ್ತಿತರರು ಹಾಜರಿದ್ದರು.