ಭಕ್ತರು ಆಂಜನೇಯ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ನಗರದ ಗಾಳಿ ಆಂಜನೇಯ ಸ್ವಾಮಿ, ಉತ್ತರ ಹಳ್ಳಿಯ ಗುಂಡಾಂಜನೇಯ, ಜೆಪಿ ನಗರದ ರಾಗಿಗುಡ್ಡ ಆಂಜನೇಯ ಸ್ವಾಮಿ, ನೆಲಮಂಗಲದ ರಾಮಾಂಜನೇಯ ಸ್ವಾಮಿ ದೇವಸ್ಥಾನ, ಕೋಟೆ ಆಂಜನೇಯ ಸ್ವಾಮಿ ಸೇರಿ ನಾಗರಬಾವಿ, ಸಂಜೀವಿನಿ ನಗರ, ಅಬ್ಬಿಗೇರಿಯನಲ್ಲಿರುವ ಆಂಜನೇಯ ದೇವಸ್ಥಾನಗಳಲ್ಲಿ ಪೂಜಾ ಕೈಂಕರ್ಯಗಳು ನಡೆದವು. ಬಳೆಪೇಟೆಯ ಪಿಳ್ಳಾಂಜನೇಯಸ್ವಾಮಿ, ಚಿಕ್ಕಪೇಟೆಯ ತುಪ್ಪದ ಆಂಜನೇಯಸ್ವಾಮಿ, ರಾಜಾಜಿನಗರ 6ನೇ ಬ್ಲಾಕ್ನಲ್ಲಿರುವ ಆಂಜನೇಯ ದೇವಸ್ಥಾನದಲ್ಲಿ ಪೂಜೆಗಳು ನೆರವೇರಿದವು.
ಹನುಮಾನ್ ಜಯಂತಿ ಪ್ರಯುಕ್ತ ಬೆಂಗಳೂರಿನ ಅಬ್ಬಿಗೇರಿಯ ಆಂಜನೇಯ ದೇವಸ್ಥಾನಕ್ಕೆ ಇಂದು(ಮಂಗಳವಾರ) ಭಕ್ತ ಸಾಗರವೆ ಹರಿದು ಬಂದಿತ್ತು, ಇಡೀ ದೇವಸ್ಥಾನವನ್ನು ವಿವಿಧ ಬಗೆಯ ಪುಸ್ಪಗಳಿಂದ ಹಾಗೂ ತಳಿರು–ತೋರಣಗಳಿಂದ ಸಿಂಗರಿಸಲಾಗಿತ್ತು. ಬೆಳಗ್ಗೆಯಿಂದಲೇ ಸಾವಿರಾರು ಸಂಖ್ಯೆಯ ಭಕ್ತರು ಸರದಿ ಸಾಲಿನಲ್ಲಿ ನಿಂತು ವಾಯು ಪುತ್ರನ ದರ್ಶನ ಪಡೆದರು.

ಬೆಳಗ್ಗೆ ಹನುಮ ದೇವರಿಗೆ ಹಾಲು, ಜೇನುತುಪ್ಪ, ಮೊಸರು, ತೆಂಗಿನ ನೀರು, ಸಕ್ಕರೆ ನೀರು, ಅರಿಶಿನ ಮತ್ತು ಇತರ ಶುಭ ಪದಾರ್ಥಗಳಿಂದ ವಿಶೇಷ ಅಭಿಷೇಕ ಮಾಡಲಾಯಿತು. ಹೂವಿನ ಅಲಂಕಾರ ಮುಂತಾದ ಧಾರ್ಮಿಕ ಕಾರ್ಯಗಳ ನಂತರ ಬಾಲ ಹನುಮನ ಮೂರ್ತಿಯನ್ನು ತೊಟ್ಟಿಲಲ್ಲಿ ಹಾಕಿ ತೂಗಲಾಯಿತು. ನೂರಾರು ಮಹಿಳೆಯರು ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ತೊಟ್ಟಿಲು ತೂಗುವ ಮೂಲಕ ತೂಗಿರೇ ಹನುಮಾನ್... ತೂಗಿರೇ ವಾಯುಪುತ್ರನ.. ಎಂದು ಜೋಗುಳ ಹಾಡುವ ಮೂಲಕ ಸಾಂಪ್ರದಾಯಿಕ ಹನುಮಾನ್ ಜಯಂತಿ ಆಚರಣೆ ಮಾಡಿದ್ದು, ಅಬ್ಬಿಗೇರಿಯ ಆಚರಣೆಗೆ ಹಿಡಿದ ಕೈಗನ್ನಡಿಯಾಗಿದೆ.
ಸಾವಿರಾರು ಭಕ್ತರು ದೇವರ ದರ್ಶನ ಪಡೆದು ಹನುಮನ ತೊಟ್ಟಿಲು ತೂಗಿ ಧನ್ಯತೆ ಮೆರೆದರು. ಭಜನೆ, ನಾಮಸಂಕೀರ್ತನೆ ಮುಗಿದ ಬಳಿಕ ಮಹಾಪೂಜೆ ನೆರವೇರಿಸಲಾಯಿತು. ಭಕ್ತರಿಗೆ ಶುಂಠಿಪುಡಿ ಪ್ರಸಾದ, ಪಂಚಕಜ್ಜೆ, ಪಾನಕವನ್ನು ವಿತರಿಸಲಾಯಿತು.ಹರಕೆ ಹೊತ್ತವರು ತುಳಸಿ, ವಡೆ, ವೀಳ್ಯದೆಲೆ ಹಾರಗಳನ್ನು ಅರ್ಪಿಸಿದರು.