ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ಸಾರ್ವಜನಿಕರಲ್ಲಿ ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಬಳ್ಳಾರಿ ನಗರದ 9ನೇ ಕ್ರಾಸ್ ನಿವಾಸಿ ಮಾಬುನ್ನಿ ಅಲಿಯಾಸ್ ಮುನ್ನಿ (25) ಎಂಬ ಯುವತಿ, ನಿನ್ನೆ ಸಾಯಂಕಾಲ ಸುಮಾರು 5 ಗಂಟೆಯ ವೇಳೆಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತ ಯುವತಿ ಬಳ್ಳಾರಿ ನಗರದ ಖಾಸಗಿ ಬ್ಯೂಟಿ ಪಾರ್ಲರ್ನಲ್ಲಿ ಕೆಲಸ ಮಾಡುತ್ತಿದ್ದು, ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದ ಮುನ್ನಿಗೆ ನಂತರ ವಿಚ್ಛೇದನವಾಗಿತ್ತು ಎಂದು ತಿಳಿದುಬಂದಿದೆ.

ವಿಚ್ಛೇದನದ ಬಳಿಕ ಮುನ್ನಿ, ಹುಸೇನ್ ನಗರದ ನಿವಾಸಿಯಾಗಿರುವ ಹಾಗೂ ಈಗಾಗಲೇ ವಿವಾಹಿತನಾಗಿ ಇಬ್ಬರು ಮಕ್ಕಳ ತಂದೆಯಾಗಿರುವ ಶೇಖ್ ವಲಿ ಎಂಬ ವ್ಯಕ್ತಿಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಈ ವಿಷಯ ಶೇಖ್ ವಲಿಯ ಪತ್ನಿ ಹಾಗೂ ತಾಯಿಗೆ ತಿಳಿದ ನಂತರ, ಮುನ್ನಿಯೊಂದಿಗೆ ಜಗಳವಾಡಿ ಹಲ್ಲೆ ನಡೆಸಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.
ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ವೈರಲ್ ಆಗಿದ್ದು, ವಿಡಿಯೋದಲ್ಲಿ ಮುನ್ನಿ,“ಶೇಖ್ ವಲಿಯಿಂದ ನನಗೆ ತೀವ್ರ ಮಾನಸಿಕ ಹಿಂಸೆ ಉಂಟಾಗಿದೆ. ಈ ಕಾರಣದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಇವರಿಗೆ ತಕ್ಕ ಶಿಕ್ಷೆ ಆಗಬೇಕು” ಎಂದು ಹೇಳಿದ್ದಾಳೆ.
ಘಟನೆಯ ಮಾಹಿತಿ ಪಡೆದ ಗಾಂಧಿನಗರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ವೈರಲ್ ವಿಡಿಯೋ, ಮೃತಳ ಹೇಳಿಕೆ ಹಾಗೂ ಲಭ್ಯವಿರುವ ಎಲ್ಲಾ ದಾಖಲೆಗಳನ್ನು ಆಧಾರವಾಗಿ ಪಡೆದು ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ವೇಳೆ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಗಾಂಧಿನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ ಪ್ರಕರಣದ ಕುರಿತು ಮಾಹಿತಿ ಪಡೆದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಈ ವೇಳೆ ಮಾಧ್ಯಮ ಜೊತೆ ಮಾತನಾಡಿ “ಈ ಘಟನೆ ಅತ್ಯಂತ ನೋವುಂಟುಮಾಡುವಂತಹದ್ದು. ಯುವತಿಯ ಆತ್ಮಹತ್ಯೆಗೆ ಕಾರಣವಾದ ಎಲ್ಲಾ ಅಂಶಗಳನ್ನು ಪೊಲೀಸರು ಸೂಕ್ಷ್ಮವಾಗಿ ತನಿಖೆ ನಡೆಸಬೇಕು. ಯಾರೇ ಆಗಿರಲಿ, ತಪ್ಪಿತಸ್ಥರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಮಹಿಳೆಯ ಮೇಲೆ ಮಾನಸಿಕ ಹಾಗೂ ದೈಹಿಕ ಹಿಂಸೆ ನಡೆಸಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಮೃತ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವ ಜವಾಬ್ದಾರಿ ನಮ್ಮದು ಎಂದು ಹೇಳಿದರು

ಮೃತ ಯುವತಿಯ ಅಕ್ಕ ಹೊನ್ನೂರ್ ಬಿ ಮಾತನಾಡಿ,“ನನ್ನ ತಂಗಿಗೆ ಶೇಖ್ ವಲಿ ಹಾಗೂ ಅವರ ಕುಟುಂಬದಿಂದ ನಿರಂತರವಾಗಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಲಾಗುತ್ತಿತ್ತು. ಈ ಬಗ್ಗೆ ನಮಗೆ ಮಾಹಿತಿ ತಡವಾಗಿ ತಿಳಿದಿದೆ . ಇವರ ಕಾಟವನ್ನು ಸಹಿಸಲಾಗದೆ ನನ್ನ ತಂಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವೈರಲ್ ಆಗಿರುವ ವಿಡಿಯೋದಲ್ಲಿಯೇ ಎಲ್ಲಾ ಸತ್ಯವಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು. ನನ್ನ ತಂಗಿಗೆ ನ್ಯಾಯ ದೊರಕಿಸಿಕೊಡಬೇಕು” ಎಂದು ಕಣ್ಣೀರಿಟ್ಟರು.