ರಾಯಚೂರು : ರಾಯಚೂರು ತಾಯಿ ಮಕ್ಕಳ ಆಸ್ಪತ್ರೆಯು ವರ್ಷದಲ್ಲಿ ದಾಖಲೆಯ 1203 ಹೆರಿಗೆ ಮಾಡಿಸಿ ಕೀರ್ತಿ ತೋರಿದ ಬೆನ್ನಲ್ಲೇ ಇಲ್ಲಿನ ತಜ್ಞರ ತಂಡವು ಟೆರಟೋಮಾ ಗಡ್ಡೆ ತೆಗೆದು ವಿಶೇಷ ಸಾಧನೆ ಮಾಡಿದೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಳೆದ ವರ್ಷ ಆರಂಭಿಸಿದ ರಾಯಚೂರು ತಾಯಿ ಮಕ್ಕಳ ಆಸ್ಪತ್ರೆಯ ಪ್ರಸೂತಿ ಹಾಗೂ ಅರವಳಿಕೆ ತಜ್ಞರ ತಂಡವು ಸುಸಜ್ಜಿತ ವೈದ್ಯಕೀಯ ಸೌಲಭ್ಯಗಳೊಂದಿಗೆ ಶಸ್ತ್ರಚಿಕಿತ್ಸಾ ಹಾಗೂ ಸರಳ ಹೆರಿಗೆಗಳನ್ನು ಸುಲಲಿತವಾಗಿ ನಿರ್ವಹಿಸುವ ಜೊತೆಗೆ ಹೆರಿಗೆಗೆ ಆಗಮಿಸುವ ತಾಯಂದಿರರಲ್ಲಿ ಆಕಸ್ಮಿಕವಾಗಿ ಕಂಡು ಬರುವ ತಾಯಿಯ ಜೀವಕ್ಕೆ ಅಪಾಯವಾಗಬಹುದಾದ ಅಂಡಾಶಯ ಟೆರಟೋಮಾ ಗಡ್ಡೆಯನ್ನು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮೂಲಕ ಹೊರಗೆದು ತಾಯಿ ಆರೈಕೆಗೆ ಕೈಜೊಡಿಸಿದೆ.
ಇದೆ ತಿಂಗಳು ತಾಯಿ ಮಕ್ಕಳ ಆಸ್ಪತ್ರೆಗೆ ತಮ್ಮ ಎರಡನೇ ಹೆರಿಗೆಗೆಂದು ಆಗಮಿಸಿದ 23 ವರ್ಷದ ಮಹಿಳೆಯನ್ನು ಪರೀಕ್ಷಿಸಿದ ಪ್ರಸೂತಿ ತಜ್ಞರಾದ ಡಾ.ವಂದನಾ ಅವರು ಸಹಜ ಹೆರಿಗೆ ಸಾಧ್ಯವಿಲ್ಲವೆಂದು ನಿರ್ಧರಿಸಿ ಆಡಳಿತ ವೈದ್ಯಾಧಿಕಾರಿ ಹಾಗೂ ಅರವಳಿಕೆ ತಜ್ಞ ಡಾ ಪ್ರಜ್ವಲ್ಕುಮಾರ ಅರೊಂದಿಗೆ ಚರ್ಚಿಸಿ ಶಸ್ತ್ರಚಿಕಿತ್ಸೆಗೆ ಕೈಗೊಳ್ಳಲು ನಿರ್ಧರಿಸಿ ಹೆರಿಗೆ ಮಾಡುವಾಗ ಅಂಡಾಶಯದ ಹತ್ತಿರ ಗಡ್ಡೆ ಕಂಡು ಬಂದಿದೆ. ತಕ್ಷಣ ತಾಯಿಯ ಆರೋಗ್ಯ ಸುರಕ್ಷತೆಯ ದೃಷ್ಟಿಯಿಂದ ಪಾಲಕರಿಗೆ ಮಾಹಿತಿ ನೀಡಿ ಓಪೇಕ್ ಆಸ್ಪತ್ರೆಯ ಕ್ಯಾನ್ಸರ್ ವಿಭಾಗದ ಡಾ.ರಮೇಶ ಸಾಗರ ಅವರ ಅಭಿಪ್ರಾಯ ಪಡೆದು ಹೆರಿಗೆ ನಂತರ ಟೆರಟೋಮಾ ಗಡ್ಡೆಯನ್ನು ತೆಗೆದಿದ್ದು, ಇದೀಗ ಪ್ರಸ್ತುತ ತಾಯಿ ಮಗು ಆರೋಗ್ಯವಾಗಿದ್ದಾರೆ.

ಏನಿದು ಅಂಡಾಶಯದ ಟೆರಾಟೋಮಾ
ಟರಾಟೊಮಾವು ವೈಜ್ಞಾನಿಕವಾಗಿ ಜೀವಾಣುಕೋಶ ಗಡ್ಡೆಯಾಗಿದ್ದು, ಎಕ್ಟೋಡರ್ಮ್, ಮೀಸೋಡರ್ಮ್ ಮತ್ತು ಎಂಡೋಡರ್ಮ್ ಸೇರಿದಂತೆ ಮೂರು ಜೀವಾಣುಕೋಶ ಪದರುಗಳಿಂದ ವಿಭಿನ್ನ ಅಂಗಾಂಶ ಹೊಂದಿರುತ್ತದೆ. ಸಾಮಾನ್ಯವಾಗಿ ಕೂದಲು, ಸ್ನಾಯು, ಹಲ್ಲುಗಳು, ಮೂಳೆ, ಥೈರಾಯ್ಡ್ ಅಂಗಾಂಶ, ಕೊಬ್ಬು ಒಳಗೊಂಡಂತೆ ರಚನೆಯಾಗುವ
ಅಂಡಾಶಯದ ಟೆರಾಟೋಮಾ ಗಡ್ಡೆಗಳಲ್ಲಿ ಹಲವಾರು ವಿಧಗಳಿವೆ ಎಂದು ಜಿಲ್ಲಾ ಆರ್ಸಿಹೆಚ್ ಅಧಿಕಾರಿ ಡಾ ನಂದಿತಾ ಮಾಹಿತಿ ನೀಡಿದ್ದಾರೆ.
ಗಡ್ಡೆ ಪರೀಕ್ಷೆ
ಶೂಶ್ರೂಷಣಾಧಿಕಾರಿಗಳಾದಸೋನಿ, ಶಾಲೀನಿ, ಸ್ವೀಟ್ ಮೇರಿ ಸೇರಿದಂತೆ ಇತರರು ಈ ಶಸ್ತ್ರಚಿಕಿತ್ಸೆಯಲ್ಲಿ ಭಾಗಿಯಾಗಿದ್ದು, ಗಡ್ಡೆಯನ್ನು ಪರೀಕ್ಷೆಗೆ ಕಳುಹಿಸಿದ್ದಾರೆ. ಪರೀಕ್ಷಾ ವರದಿಯನ್ವಯ ಯಾವುದೇ ಅಪಾಯದ ಲಕ್ಷಣಗಳಿಲ್ಲದಿದ್ದರೂ ಪ್ರತಿ ಮೂರು ತಿಂಗಳಿಗೊಮ್ಮೆ ಸ್ನ್ಕಾನಿಂಗ್ ಮಾಡಿಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ನಿರ್ಲಕ್ಷ್ಯ ಬೇಡ
ಅಂಡಾಶಯದ ಟೆರಾಟೋಮಾ ರಚನೆಯಾಗಲು ನೇರವಾದ ಕಾರಣವು ಪತ್ತೆಯಾಗದಿದ್ದರೂ ಬಹಳಷ್ಟು ಪ್ರಕರಣಗಳಲ್ಲಿ ಹೆಚ್ಚಿನ ಅಂಡಾಶಯದ ಟೆರಾಟೋಮಾ ಗಡ್ಡೆಗಳು ಸೌಮ್ಯವಾಗಿದ್ದರು ಸಹ ಸುಮಾರು ಶೇ.1–2 ಪ್ರಕರಣಗಳಲ್ಲಿ ಕ್ಯಾನ್ಸರ್ ಗಡ್ಡೆಯಾಗಬಹುದಾಗಿದೆ. ಈ ಪ್ರಕರಣದಲ್ಲಿನ ತಾಯಿಗೆ ಯಾವುದೆ ಗಂಭೀರ ಅಪಾಯವಿಲ್ಲ ಎನ್ನುತ್ತಾರೆ ವೈದ್ಯರು.
ಡಿಎಚ್ಓ ಏನಂತಾರೆ:
ರಾಯಚೂರು ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಪ್ರಸೂತಿ ಹಾಗೂ ಅರವಳಿಕೆ ತಜ್ಞರ ತಂಡವು ಹೆರಿಗೆ ಮಾತ್ರವಲ್ಲದೆ, ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗೂ ಮುಂದಾಗಿರುವುದು ವಿಶೇಷ ಸಾಧನೆಯಾಗಿದೆ. ಟೆರಾಟೋಮಾ ಗಡ್ಡೆಗಳ ಬಗ್ಗೆ ನಿರ್ಲಕ್ಷ್ಯ ಮಾಡಬಾರದು. ಎಲ್ಲ ಗರ್ಭಿಣಿಯರು, ಹೆರಿಗೆ ಪೂರ್ವದಲ್ಲಿ ವೈದ್ಯರ ಸಲಹೆ ಪಡೆದು ನಿರಂತರ ಪರೀಕ್ಷೆಗಳನ್ನು ನಡೆಸಬೇಕು.
-ಡಾ.ಸುರೇಂದ್ರಬಾಬು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ರಾಯಚೂರು ಜಿಲ್ಲೆ