LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

9 ಮತ್ತು 10 ನೇ ತರಗತಿ ಮೂರನೇ ಭಾಷೆ ಕಡ್ಡಾಯ ಪರೀಕ್ಷೆ ನಿಲ್ಲಿಸಿ - ಜ್ಞಾನೇಶ್ವರ್

ಬೆಂಗಳೂರು: ಕರ್ನಾಟಕ ಶಿಕ್ಷಣ ಪಠ್ಯಕ್ರಮದಲ್ಲಿ ಓದುತ್ತಿರುವ ಲಕ್ಷಾಂತರ ಬಡ, ಹಿಂದುಳಿದ, ಮಧ್ಯಮ ವರ್ಗ ಮತ್ತು ರೈತಾಪಿ ವರ್ಗದ ಮಕ್ಕಳಿಗೆ 9 ಮತ್ತು 10ನೇ ತರಗತಿಯಲ್ಲಿ ಮೂರು ಭಾಷೆ ಕಲಿಕೆ, ಪರೀಕ್ಷೆ ಹಾಗೂ ಉತ್ತೀರ್ಣವಾಗುವುದು ಕಡ್ಡಾಯವಾಗಿದೆ. ಇದರಿಂದ ಮಕ್ಕಳಿಗೆ ಹೊರೆಯಾಗುತ್ತಿದ್ದು ಕರ್ನಾಟಕ ಶಿಕ್ಷಣ ಪಠ್ಯದಲ್ಲಿ ತುರ್ತಾಗಿ 9 ಮತ್ತು 10ನೇ ತರಗತಿಯಲ್ಲಿ ಮೂರನೇ ಭಾಷೆ ಕಡ್ಡಾಯ ಪರೀಕ್ಷೆ ನಿಲ್ಲಿಸಬೇಕೆಂದು ಬೆಂಗಳೂರಿನ ಕನ್ನಡ ಮೊದಲು ಸ್ನೇಹಿತರು ಮತ್ತು ಸಂಘಟನೆಗಳ ಬಳಗವು ಸರ್ಕಾರವನ್ನು ಒತ್ತಾಯಿಸಿದೆ.



ಕನ್ನಡ ಮೊದಲು ಬಳಗದ ಸಂಸ್ಥಾಪಕ, ಪ್ರಾದೇಶಿಕ ಹಕ್ಕಿನ ಆಂದೋಲನಗಾರ ಜ್ಞಾನೇಶ್ವರ್ ಎಂ., ಅವರ ನಿಯೋಗವು ಈ ಕುರಿತು ಶಿಕ್ಷಣ ಸಚಿವ ಮಧುಬಂಗಾರಪ್ಪನವರಿಗೆ ಮನವರಿಕೆ ಮಾಡಿಕೊಟ್ಟ ಬಳಿಕ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಕರ್ನಾಟಕದ ಕನ್ನಡ ಶಾಲೆಯ ಮಕ್ಕಳಿಗೆ ಸರ್ಕಾರ ತಾರತಮ್ಯ ಮಾಡಬಾರದು ಎಂದು ತಾಕೀತು ಮಾಡಿದರು. ಐಸಿಎಸ್‌ಇ, ಸಿಬಿಎಸ್‌ಇ ಪಠ್ಯಕ್ರಮದಲ್ಲಿ 9 ಮತ್ತು 10ನೇ ತರಗತಿಗೆ ಎರಡೇ ಭಾಷೆ ಕಲಿಸಲಾಗುತ್ತಿದೆ. ಇವರಿಗೆ ಐದು ಸಿಲೆಬಸ್ ಇದ್ದರೆ, ಕರ್ನಾಟಕದ ಶಾಲೆಗಳ ಮಕ್ಕಳಿಗೆ ಆರು ಸಿಲೆಬಸ್ ಹೇಳಿಕೊಡಲಾಗುತ್ತಿದೆ. ಇದು ಮಕ್ಕಳಿಗೆ ಹೊರೆ ಆಗುತ್ತದೆ. ನಮ್ಮ ಮಕ್ಕಳಿಗೆ ಭಾಷಾ ನೀತಿಯಿಂದ ಭಾರೀ ಭಾಷಾ ತಾರತಮ್ಯ ಹೇರಿಕೆ ಮತ್ತು ಹೊರೆಯಾಗುತ್ತಿದ್ದು ಕೂಡಲೇ ನಿಲ್ಲಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ಚೇತನ್ ಅಹಿಂಸಾ ಮಾತನಾಡಿ, ಮೂರನೇ ನುಡಿ ಕಲಿಕೆಯನ್ನು 1ನೇ ತರಗತಿಯಿಂದ 10ನೇ ತರಗತಿವರೆಗೂ ಕಡ್ಡಾಯ ಪರೀಕ್ಷೆ ಮತ್ತು ಕಡ್ಡಾಯ ತೇರ್ಗಡೆಯಾಗುವುದನ್ನು ಶಿಕ್ಷಣದಿಂದ ತೆಗೆಯಬೇಕು. 14 ಲಕ್ಷ ಮಕ್ಕಳು 9 ಮತ್ತು 10ನೇ ತರಗತಿಯಲ್ಲಿ ಕಷ್ಟಪಟ್ಟು ಓದುತ್ತಿದ್ದಾರೆ. ಇಂಥ ಮಕ್ಕಳಿಗಾಗಿ ತುರ್ತಾಗಿ ಇದನ್ನು ನಿಲ್ಲಿಸಬೇಕು. ಸಿಬಿಎಸ್‌ಇ ಮತ್ತು ಐಸಿಎಸ್‌ಇ ನಲ್ಲಿ 80 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ನಮ್ಮ ಮಕ್ಕಳಿಗೆ ಅನ್ಯಾಯವಾಗುವಂಥ ಶಿಕ್ಷಣ ಪದ್ಧತಿ ಬೇಡ ಎಂದರು.



ಸಾರಿಕಾ ಶೋಭಾ ಅವರು ಮಾತನಾಡಿ, ಶಿಕ್ಷಣದಲ್ಲಿ ಸಮಾನತೆ ಬೇಕು. ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಹೊರೆಯಾಗದಂತಹ ಶಿಕ್ಷಣ ಪದ್ಧತಿ ಅಗತ್ಯವಿದೆ. ಭಾಷೆಯ ವಿಷಯದಲ್ಲಿ ಮಕ್ಕಳಿಗೆ ತಾರತಮ್ಯ ತರಬಾರದು ಎಂದು ಸಚಿವರಾದ ಮಧು ಬಂಗಾರಪ್ಪನವರಲ್ಲಿ ನಿವೇದಿಸಿಕೊಂಡಿರುವುದಾಗಿ ಹೇಳಿದರು.

ವೀರಸಂಗಯ್ಯ ಮತ್ತು ರಮೇಶ್ ಅವರು ಮಾತನಾಡಿ, ಉಳ್ಳವರ ಮಕ್ಕಳಿಗೆ ಒಂದು ನೀತಿ, ಇಲ್ಲದವರ ಮಕ್ಕಳಿಗೊಂದು ನೀತಿ ಸರಿಯಲ್ಲ. ಹಿಂದಿ ಗುಲಾಮಗಿರಿಯಿಂದ ಆಚೆ ಬರಬೇಕು. ಶಿಕ್ಷಣ ಇಲಾಖೆ ವೈಜ್ಞಾನಿಕವಾಗಿ ಶಿಕ್ಷಣ ಬೋಧನೆ ಮಾಡಬೇಕು. ತಮಿಳುನಾಡಿನಲ್ಲಿರುವ ಶಿಕ್ಷಣ ಪದ್ಧತಿ ಇಲ್ಲಿ ಜಾರಿಯಾಗಬೇಕೆಂದರು.

 

ಸುದ್ದಿಗೋಷ್ಠಿಯಲ್ಲಿ ಕನ್ನಡ ಮೊದಲು ಬಳಗದ ವಸಂತ್ ಪೂಜಾರಿ, ಜ್ಯೋತಿ, ಸಿರಾಜ್ ಇನ್ನಿತರರು ಇದ್ದರು. 
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST