ಬೆಂಗಳೂರು : ರೋಟರಿ ಬೆಂಗಳೂರು ಬನ್ನೇರುಘಟ್ಟ ಮತ್ತು ಮೋಟೋಫೆಡ್ (ಮೋಟೋ ಟೂರಿಸಂ ಮತ್ತು ಬೈಕಿಂಗ್ ಸಮುದಾಯ ಫೆಡರೇಶನ್ ಆಫ್ ಇಂಡಿಯಾ)ದಿಂದ ರಸ್ತೆ ಸುರಕ್ಷತೆ ಕುರಿತು ಅರಿವು ಮೂಡಿಸಲು “ರೋಟರಿ ತಿರಂಗಾ ರೋಡ್ ಶೋ” ಬೈಕ್ ಜಾಥಾ ಅದ್ದೂರಿಯಾಗಿ ನಡೆಯಿತು.
ವೇಗಾ ಸಿಟಿ ಮಾಲ್ನಿಂದ ಪ್ರಾರಂಭವಾದ ಈ ಬೈಕ್ ಜಾಥಾ, ಮೀರಿಯಾ ಗ್ರೀನ್ ಬನ್ನೇರುಘಟ್ಟ ರಸ್ತೆವರೆಗೆ 11 ಕಿ.ಮೀ. ದೂರ ಸಾಗಿತು.

ಶಾಸಕ ಸಿ.ಕೆ. ರಾಮಮೂರ್ತಿ, ರೋಟರಿ ಇಂಟರ್ನ್ಯಾಷನಲ್ ಅಧ್ಯಕ್ಷರಾದ ಫ್ರಾನ್ಸೆಸ್ಕೋ ಅರೆಜ್ಜೊ, ಜಿಲ್ಲಾ ಗವರ್ನರ್ ಶ್ರೀಧರ್ ಬಿ.ಆರ್, ರೋಟರಿ ಬನ್ನೇರುಘಟ್ಟ ಅಧ್ಯಕ್ಷರಾದ ಡಾ. ಕನವಲ್ ಕಮ್ರಾ ಚಾಲನೆ ನೀಡಿದರು.
ಶಾಸಕ ಸಿ.ಕೆ. ರಾಮಮೂರ್ತಿರವರು ಮಾತನಾಡಿ, “ಬೆಂಗಳೂರು ನಗರದಲ್ಲಿ ಪ್ರತಿದಿನ ಸಂಚಾರ ನಿಯಮಗಳನ್ನು ಪಾಲಿಸದೇ ಇರುವುದು ಕಂಡು ಬರುತ್ತಿದೆ. ಅತಿವೇಗದ ಚಾಲನೆ, ಹೆಲ್ಮೆಟ್ ರಹಿತ ಚಾಲನೆ ಮಾಡುವುದರಿಂದ ಅಪಘಾತ ನಡೆಯಲು ಪ್ರಮುಖ ಕಾರಣವಾಗಿದೆ. ಸಾರ್ವಜನಿಕರು ರಸ್ತೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಬೇಕು” ಎಂದು ಕರೆ ನೀಡಿದರು.
ಡಾ. ಕನವಲ್ ಕಮ್ರಾ ಮಾತನಾಡಿ, “ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ ದಂಡ ಪಾವತಿಸಬಹುದು. ಆದರೆ ಪ್ರಾಣ ಹೋದರೆ ಮತ್ತೆ ಮರಳಿ ಬರುವುದಿಲ್ಲ. ಅಪಘಾತದಿಂದ ಅಂಗವಿಕಲರಾದರೆ ಜೀವನವಿಡೀ ನರಳಬೇಕಾಗುತ್ತದೆ. ಜನರಲ್ಲಿ ಜಾಗೃತಿ ಮೂಡಿಸಲು ಈ ಬೈಕ್ ಜಾಥಾ ಆಯೋಜಿಸಲಾಗಿದೆ” ಎಂದು ಹೇಳಿದರು.

ಈ ಸಂದರ್ಭದಲ್ಲಿ ರೋಟರಿ ಬನ್ನೇರುಘಟ್ಟದ ಶ್ರೀಮತಿ ರಮ ಕುಲಕರ್ಣಿ, ಅನಿಲ್, ಸುರೇಶ್ ಪ್ರಕಾಶ್, ವಂದನಾ ಕುಲಕರ್ಣಿ, ಕನ್ವಲ್, ರಾಜೀವ್ ಗುಪ್ತ ಸೇರಿದಂತೆ ಅನೇಕರು ಭಾಗವಹಿಸಿದರು.
ಕಾರ್ಯಕ್ರಮದ ಅಂಗವಾಗಿ ರೋಟರಿ ಬನ್ನೇರುಘಟ್ಟ ವತಿಯಿಂದ ಮೀರಿಯಾ ಗ್ರೀನ್ ನಲ್ಲಿ ವಿಕಲಚೇತನರಿಗೆ ವೀಲ್ಚೇರ್ಗಳನ್ನು ವಿತರಿಸಲಾಯಿತು.