ಬಂಧಿತರು ದಿನೇಶ ಮತ್ತು ಯಶ್ವಂತ್ @ ಬಂಟಿ ಎಂದು ಗುರುತಿಸಲಾಗಿದೆ. ಕಂಪ್ಲಿಯ ವೆಂಕಟಾಪುರ ನಿವಾಸಿ ಮಾರುತೇಶ ಅಡ್ಡೆ ಎನ್ನುವವರು ತಮ್ಮ ಹೆಚ್.ಎಫ್.ಡೀಲಕ್ಸ್ ಬೈಕ್ ಕಳ್ಳತನವಾಗಿರುವ ಕುರಿತು ಮಾ.1 ರಂದು ರಾತ್ರಿ 10 ಗಂಟೆಗೆ ಕಳ್ಳತನವಾಗಿರುವ ಬಗ್ಗೆ ಪ್ರಕರಣ ದಾಖಲಿಸಿದ್ದರು. ಕಳುವಾದ ಮೋಟರ್ ಸೈಕಲ್ಗಳು ಮತ್ತು ಆರೋಪಿತರ ಪತ್ತೆಗಾಗಿ ಬಳ್ಳಾರಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ.ಶೋಭಾರಾಣಿ.ವಿ.ಜೆ ರವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನವೀನ್ ಕುಮಾರ್ ಮುಂದಾಳತ್ವದಲ್ಲಿ ತೋರಣಗಲ್ ಉಪವಿಭಾಗದ ಡಿಎಸ್ಪಿ ಪ್ರಸಾದ್ ಗೋಖಲೆ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿತ್ತು.
ಕಂಪ್ಲಿ ಪೊಲೀಸ್ ಠಾಣೆಯ ಅಧಿಕಾರಿ ವಾಸುಕುಮಾರ್.ಕೆ.ಬಿ, ಪಿಎಸ್ಐ ಅವಿನಾಶ ಕಾಂಬ್ಳೆ, ಸಿಬ್ಬಂದಿಗಳಾದ ಹೆಚ್.ಸಿ ಬಸವರಾಜ ಹಿರೇಮಠ, ಪಿಸಿ ಸತ್ಯನಾರಾಯಣ, ಮಲ್ಲೇಶ ರಾಠೋಡ್, ಮುತ್ತುರಾಜ ಮತ್ತು ಸುರೇಶ ಮೋಟರ್ ಸೈಕಲ್ ಪತ್ತೆ ಕಾರ್ಯ ನಡೆಸಿದ್ದರು. ಜು.31ರಂದು ಬೆಳಿಗ್ಗೆ 11-30 ಗಂಟೆಗೆ ಕಂಪ್ಲಿ-ಕುರುಗೋಡು ರಸ್ತೆಯ ಕಮ್ಮಾ ಭವನದ ಮುಂದೆ ವಾಹನಗಳನ್ನು ತಪಾಸಣೆ ಮಾಡುತ್ತಿರುವಾಗ ಈ ಪ್ರಕರಣದಲ್ಲಿ ಕಳುವಾದ ಮೋಟರ್ ಸೈಕಲ್ ಮತ್ತು ಮೋಟರ್ ಸೈಕಲ್ ಕಳ್ಳತನ ಮಾಡಿದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿತರನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಈ ಇಬ್ಬರು ಆರೋಪಿಗಳು ತಮ್ಮೊಂದಿಗೆ ಕಂಪ್ಲಿ ಪಟ್ಟಣದ ಎಲ್.ಜಿ.ಕಾರ್ತಿಕ, ಕೃಷ್ಣ, ಮೆಟ್ರಿ ಬಾಷ ರವರು ಸೇರಿ ಸುಮಾರು 01 ವರ್ಷದಿಂದ ಕಂಪ್ಲಿ ಪಟ್ಟಣ, ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟ, ತುಮಕೂರು ಬಸ್ ನಿಲ್ದಾಣ, ಚಿತ್ರದುರ್ಗ ಬಸ್ ನಿಲ್ದಾಣ, ದಮ್ಮೂರು ಗ್ರಾಮ, ಸಿಂಧನೂರು ಅಂಬಾಮಠ ಹಾಗೂ ಆಂಧ್ರ ಪ್ರದೇಶದ ವಿಡಪನಕಲ್ಲು, ತೋರಣಗಲ್ಲು, ಮುನಿರಾಬಾದ್ ರೈಲ್ವೆ ಸ್ಟೇಷನ್ ನಲ್ಲಿ ಕಳ್ಳತನ ಮಾಡಿರುವ ಒಟ್ಟು 09 ಲಕ್ಷ ರೂಪಾಯಿ ಬೆಲೆಬಾಳುವ 11 ಮೋಟರ್ ಸೈಕಲ್ಗಳನ್ನು ಪತ್ತೆಮಾಡಿದ್ದಾರೆ.
ತನಿಖಾಧಿಕಾರಿ ಮತ್ತು ಪೊಲೀಸ್ ಸಿಬ್ಬಂದಿಯವರ ಕಾರ್ಯವೈಖರಿಯನ್ನು ಬಳ್ಳಾರಿ ಜಿಲ್ಲಾ ಡಾ.ಶೋಭಾರಾಣಿ.ವಿ.ಜೆ ರವರು ಶ್ಲಾಘಿಸಿ ಬಹುಮಾನವನ್ನು ಘೋಷಿಸಿದ್ದಾರೆ.